ಮಲಪ್ಪುರಂ, ಜ 04 (DaijiworldNews/DB): ಶಬರಿಮಲೆ ಅಯ್ಯಪ್ಪ ಸ್ವಾಮಿ ಕುರಿತ ಚಲನಚಿತ್ರವನ್ನು ಹೊಗಳಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಸಿಪಿಐ ಮುಖಂಡರೊಬ್ಬರ ಅಂಗಡಿಯನ್ನು ಕೆಲವು ವ್ಯಕ್ತಿಗಳು ಧ್ವಂಸಗೈದ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿನ ಸಿ. ಪ್ರಗೀಲೇಶ್ ಮಾಲೀಕತ್ವದ ಲೈಟ್ ಆಯಂಡ್ ಸೌಂಡ್ ಸರ್ವೀಸ್ ಅಂಗಡಿಯನ್ನು ಜನವರಿ 1ರಂದು ರಾತ್ರಿ ಧ್ವಂಸಗೊಳಿಸಲಾಗಿದೆ. ಅಯ್ಯಪ್ಪ ಸ್ವಾಮಿಯ ಕಥೆಯಾಧರಿತ "ಮಲಿಕಪ್ಪುರಂ" ಚಿತ್ರವನ್ನು ಹೊಗಳಿ ಪ್ರಗಿಲೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಇದರಿಂದ ಕೆಲವರು ಆಕ್ರೋಶಗೊಂಡು ಅಂಗಡಿಯನ್ನೇ ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಅಂಗಡಿಗೆ ಧಾಳಿ ನಡೆಸುವುದಾಗಿ ಸಾಮಾಜಿಕ ಜಾಲತಾಣದಲ್ಲೇ ಅವರಿಗೆ ಕೆಲವು ವ್ಯಕ್ತಿಗಳು ಬೆದರಿಕೆಯೊಡ್ಡಿದ್ದರು ಎಂದು ತಿಳಿದು ಬಂದಿದೆ.
ನಟ ಉನ್ನಿ ಮುಕುಂದನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಬೇಕೆಂಬ ಆಸೆ ಹೊಂದಿದ ಪುಟ್ಟ ಹಳ್ಳಿಕ ಕಥಾಹಂದರವನ್ನು ಈ ಚಿತ್ರ ಹೊಂದಿದೆ.