ಬೆಂಗಳೂರು, ಜ 04 (DaijiworldNews/DB): ರಾಜ್ಯ ವಿಧಾನಸಭೆ ಚುನಾವಣೆಗೆ ತಿಂಗಳುಗಳು ಬಾಕಿ ಉಳಿದಿರುವಂತೆಯೇ ಮಾಜಿ ಸಿಎಂ, ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ.
ತಮ್ಮ ನಿವೃತ್ತಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಪ್ರಸ್ತುತ 90 ವರ್ಷ ವಯಸ್ಸಾಗಿದೆ. ವಯೋ ಸಹಜ ಕಾರಣಗಳಿಂದಾಗಿ ರಾಜಕೀಯದಲ್ಲಿ ಸಕ್ರಿಯವಾಗಿ ಇರಲು ಸಾಧ್ಯವಾಗುವುದಿಲ್ಲ. ಹೀಗಾಗಿ ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದರು.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆ ವಿಚಾರವಾಗಿ ಕೇಳಿದಾಗ ಪ್ರತಿಕ್ರಿಯಿಸಿ ಅವರು, ಪಕ್ಷದ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಅದರಲ್ಲಿ ಭಾಗಿಯಾಗುವ ಸಂದರ್ಭ ಬಂದಲ್ಲಿ ಆಗ ನೋಡೋಣ. ವರಿಷ್ಠರೇನಾದರೂ ಸಲಹೆಗಳನ್ನು ಕೇಳಿದಲ್ಲಿ ಖಂಡಿತವಾಗಿಯೂ ಅನುಭವದ ಮೇರೆಗೆ ಅದನ್ನು ಹಂಚಿಕೊಳ್ಳಬಲ್ಲೆ ಎಂದು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ದೇಶದ ಮಹಾನ್ ವ್ಯಕ್ತಿಗಳಲ್ಲೊಬ್ಬರು. ಅವರ ಹೆಸರನ್ನು ಮೈಸೂರು ರಸ್ತೆಗೆ ನಾಮಕರಣ ಮಾಡುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗು ಸಿಎಂಗೆ ಮನವಿ ಮಾಡಿದ್ದೇನೆ. ಏನಾಗುತ್ತದೆಯೋ ನೋಡೋಣ ಎಂದರು.
ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆಯೇ ಎಂಬ ಬಗ್ಗೆ ಸುದ್ದಿಗಾರರು ಕೇಳಿದಾಗ, ನಾನೇ ರಾಜಕೀಯದಿಂದ ನಿವೃತ್ತಿಯಾಗುತ್ತಿರುವಾಗ ಕಡೆಗಣಿಸುವ ಮಾತೆಲ್ಲಿಂದ ಬಂತು ಎಂದು ಪ್ರತಿಕ್ರಿಯಿಸಿದರು.