ನವದೆಹಲಿ, ಜ 04 (DaijiworldNews/DB): ಸ್ಕೂಟಿಗೆ ಕಾರು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಕೂಟಿ ಸವಾರೆಯನ್ನು 12 ಕಿ.ಮೀ.ವರೆಗೆ ಕಾರು ಎಳೆದೊಯ್ದಿರುವ ಘಟನೆ ಸಂಬಂಧಿಸಿದಂತೆ ಮೃತ ಯುವತಿ ಮದ್ಯ ಸೇವನೆ ಮಾಡಿಲ್ಲ ಎಂದು ಆಕೆಯ ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.
ಮೃತ ಯುವತಿ ಅಂಜಲಿ ಸಿಂಗ್ ಮದ್ಯ ಸೇವಿಸಿ ಸ್ಕೂಟಿ ಚಾಲನೆ ಮಾಡುತ್ತಿದ್ದಳು ಎಂಬುದಾಗಿ ಆಕೆಯ ಸ್ನೇಹಿತ ಹೇಳಿದ ಬೆನ್ನಲ್ಲೇ ಕುಟುಂಬಿಕರು ಈ ಸ್ಪಷ್ಟನೆ ನೀಡಿದ್ದು, ಶವ ಪರೀಕ್ಷೆ ವೇಳೆ ಆಕೆ ಮದ್ಯ ಸೇವಿಸಿದ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದಿದ್ದಾರೆ.
ಯುವತಿ ಶವಪರೀಕ್ಷೆಯ ವರದಿಯೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಕೆಯ ಕುಟುಂಬದ ಸದಸ್ಯ ಭೂಪೇಂದ್ರ ಸಿಂಗ್ ಚೌರಾಸಿಯಾ, ಆಕೆ ಮದ್ಯಪಾನ ಮಾಡಿರುವ ಸಂಬಂಧ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಯಾವುದೇ ಉಲ್ಲೇಖ ಇಲ್ಲ. ಅಲ್ಲದೆ ಇಬ್ಬರೂ ಒಟ್ಟಿಗೆ ಸಂಚರಿಸುತ್ತಿದ್ದಾಗ ಆಕೆಯೊಂದಿಗೆ ಇದ್ದ ಇನ್ನೊಬ್ಬಳು ಯಾವುದೇ ಅಪಾಯಗಳಿಲ್ಲದೆ ಪಾರಾಗುವುದಕ್ಕೆ ಹೇಗೆ ಸಾಧ್ಯ? ಇದು ಪೂರ್ವ ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ.
ದೆಹಲಿಯ ಹೊರಭಾಗದ ಸುಲ್ತಾನ್ಪುರಿಯಲ್ಲಿ ಭಾನುವಾರ ಬೆಳಗ್ಗೆ ಘಟನೆ ನಡೆದಿತ್ತು. ಬಲೆನೊ ಕಾರು ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಚಲಾಯಿಸುತ್ತಿದ್ದ 20 ವರ್ಷದ ಯುವತಿ ಸಾವನ್ನಪ್ಪಿದ್ದಳು. ಅಲ್ಲದೆ ಆಕೆಯ ದೇಹ ಕಾರಿನೊಳಗೆ ಸಿಲುಕಿಕೊಂಡು ಸುಮಾರು 12 ಕಿ.ಮೀ.ವರೆಗೆ ಎಳೆದೊಯ್ದಿತ್ತು.