ಭೋಪಾಲ್, ಜ 04 (DaijiworldNews/DB): ಮಾಡದ ತಪ್ಪಿಗೆ ಎರಡು ವರ್ಷ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದಕ್ಕಾಗಿ ವ್ಯಕ್ತಿಯೊಬ್ಬ ಮಧ್ಯಪ್ರದೇಶ ಸರ್ಕಾರದಿಂದ 10,000 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾನೆ!
ಮಧ್ಯಪ್ರದೇಶದ ರತ್ಲಂ ನಿವಾಸಿ ಕಾಂತಿಲಾಲ್ ಭೀಲ್(35) ಅವರೇ ಇಷ್ಟು ದೊಡ್ಡ ಮೊತ್ತದ ಪರಿಹಾರ ಕೇಳಿದ ವ್ಯಕ್ತಿ. 2018ರ ಜುಲೈ ತಿಂಗಳಲ್ಲಿ ಕಾಂತಿಲಾಲ್ ವಿರುದ್ದ ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಸಹೋದರನ ಮನೆಗೆ ಬಿಡುವುದಾಗಿ ಹೇಳಿ ನನ್ನ ಮೇಲೆ ಅತ್ಯಾಚಾರಗೈದು ಬೇರೊಬ್ಬ ವ್ಯಕ್ತಿಗೆ ಹಸ್ತಾಂತರಿಸಿದ್ದು, ಆತ ಆರು ತಿಂಗಳು ನನ್ನ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ದೂರಿನಲ್ಲಿ ಮಹಿಳೆ ಹೇಳಿದ್ದಳು. ಈ ಹಿನ್ನೆಲೆಯಲ್ಲಿ 2020ರ ಡಿಸೆಂಬರ್ 23ರಂದು ಪೊಲೀಸರು ಕಾಂತಿಲಾಲ್ನನ್ನು ಬಂಧಿಸಿದ್ದರು.
ಎರಡು ವರ್ಷಗಳ ಕಾಲ ವಿಚಾರಣೆ ನಡೆದ ಬಳಿಕ ಸ್ಥಳೀಯ ನ್ಯಾಯಾಲಯವು ಕಾಂತಿಲಾಲ್ನನ್ನು ನಿರಪರಾಧಿ ಎಂದು ಘೋಷಿಸಿದ್ದು, ನ್ಯಾಯಾಲಯದ ತೀರ್ಪು ಪ್ರಕಟಬಾಗುತ್ತಿದ್ದಂತೆಯೇ ರಾಜ್ಯ ಸರ್ಕಾರ 10,000 ಕೋಟಿ ರೂಪಾಯಿ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕಾಂತಿಲಾಲ್ ಜಿಲ್ಲಾ ಮತ್ತು ಸೆಷನ್ ಕೋರ್ಟ್ ಮೊರೆ ಹೋಗಿದ್ದಾನೆ.
ಎರಡು ವರ್ಷ ಕಾಲ ನಾನು ಮಾಡದ ತಪ್ಪಿಗೆ ಅಪರಾಧಿಯಾಗಿದ್ದೆ. ನನ್ನ ಕುಟುಂಬವನ್ನು ಮಾನಸಿಕವಾಗಿ ನೊಂದುಕೊಳ್ಳುವಂತೆ ಸರ್ಕಾರ ಮಾಡಿದೆ. ನನ್ನದಲ್ಲದ ತಪ್ಪಿಗೆ ವಕೀಲರಿಗಾಗಿ ನಾನು 6.02 ಕೋಟಿ ರೂ. ಖರ್ಚು ಮಾಡಿದ್ದೇನೆ. ಅಲ್ಲದೆ, ನನ್ನ ಕುಟುಂಬ ಒಂದೊತ್ತಿನ ಊಟಕ್ಕೂ ನನ್ನ ಅನುಪಸ್ಥಿತಿಯಲ್ಲಿ ಪರದಾಡಿದೆ. ಹೀಗಾಗಿ ಪರಿಹಾರ ನೀಡಬೇಕು ಎಂದು ಆತ ಅರ್ಜಿಯಲ್ಲಿ ತಿಳಿಸಿದ್ದಾನೆ. ಜನವರಿ 10ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.