ಲಕ್ನೋ, ಜ 04 (DaijiworldNews/DB): ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಟವೆಲ್ನ್ನು ಹೊಟ್ಟೆಯೊಳಗೆ ಬಿಟ್ಟು ಹೊಲಿಗೆ ಹಾಕಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಹಿಳೆಯ ಹೊಟ್ಟೆನೋವು ಬಿಗಡಾಯಿಸಿದ್ದರಿಂದ ಬೇರೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವಿಚಾರ ಬೆಳಕಿಗೆ ಬಂದಿದೆ.
ರಾಜೀವ್ ಸಿಂಘಾಲ್
ಉತ್ತರ ಪ್ರದೇಶದ ಅಮ್ರೋಹಾದ ಬನ್ಸ್ ಖೇರಿ ಗ್ರಾಮದಲ್ಲಿ ವೈದ್ಯ ಮತ್ಲೂಬ್ ಎಂಬವರು ಸೈಫೀ ನರ್ಸಿಂಗ್ ಹೋಮ್ಗೆ ಹೆರಿಗೆ ನೋವಿನಿಂದ ಮಹಿಳೆ ಬಂದಿದ್ದರು. ಈ ವೇಳೆ ಅಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಶಸ್ತ್ರಚಿಕಿತ್ಸೆ ಮುಗಿದ ಬಳಿಕ ಟವೆಲ್ನ್ನು ವೈದ್ಯರು ಹೊಟ್ಟೆಯೊಳಗೇ ಬಿಟ್ಟಿದ್ದಾರೆ. ಆಕೆಯನ್ನು ಐದು ದಿನ ದಾಖಲಿಸಿಕೊಂಡು ಬಳಿಕ ಮನೆಗೆ ಕಳುಹಿಸಿಕೊಡಲಾಗಿತ್ತು. ಆದರೆ ಮನೆಗೆ ಬಂದ ಮೇಲೆ ಹೊಟ್ಟೆನೊವು ಬಿಗಡಾಯಿಸಿದ್ದರಿಂದ ಆಕೆಯ ಪತಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ಮಹಿಳೆಯನ್ನು ಕರೆದೊಯ್ದಿದ್ದಾರೆ. ಅಲ್ಲಿ ಮಹಿಳೆಯ ಹೊಟ್ಟೆನೋವಿನ ಹಿಂದಿನ ಅಸಲಿ ಸತ್ಯ ಬಹಿರಂಗಗೊಂಡಿದೆ. ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ಟವೆಲ್ನ್ನು ಹೊರ ತೆಗೆಯಲಾಯಿತು.
ಇನ್ನು ಘಟನೆ ಸಂಬಂಧ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ರಾಜೀವ್ ಸಿಂಘಾಲ್ ಅವರು ತನಿಖೆಗೆ ಆದೇಶಿಸಿದ್ದಾರೆ. ಸಮಗ್ರವಾಗಿ ಪರಿಶೀಲನೆ ನಡೆಸುವಂತೆ ನೋಡಲ್ ಅಧಿಕಾರಿ ಡಾ. ಶರದ್ ಅವರಿಗೆ ಸೂಚಿಸಲಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದವರು ತಿಳಿಸಿದ್ದಾರೆ. ಅಮ್ರೋಹಾದ ನೌಗಾವಾನಾ ಸಾದತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ಲೂಬ್ ಅವರು ಅನುಮತಿ ಇಲ್ಲದೇ ನರ್ಸಿಂಗ್ ಹೋಂ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.