ಬಾಗ್ಪತ್, ಜ 04 (DaijiworldNews/DB): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶದಲ್ಲಿ ಸಂಚರಿಸುತ್ತಿದ್ದು, ವಿಪಕ್ಷಗಳ ನಾಯಕರಾರೂ ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿಲ್ಲ.
ಅಖಿಲೇಶ್ ಯಾದವ್, ಮಾಯಾವತಿ, ಆರ್ಎಲ್ಜಿಡಿಯ ಜಯಂತ್ ಸೇರಿದಂತೆ ಹಲವರಿಗೆ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ನೀಡಲಾಗಿತ್ತು. ಇವರೆಲ್ಲರೂ ಯಾತ್ರೆಗೆ ಶುಭಕೋರಿ ರಾಹುಲ್ ಗಾಂಧಿಯವರಿಗೆ ಹಾರೈಸಿದ್ದಾರೆ. ಆದರೆ ಯಾತ್ರೆ ಉತ್ತಪ್ರದೇಶ ಪ್ರವೇಶಿಸಿ ಒಂದು ದಿನ ಕಳೆದರೂ ಯಾವುದೇ ವಿಪಕ್ಷ ನಾಯಕರು ಭಾಗವಹಿಸಿಲ್ಲ.
ಇನ್ನು ಯಾತ್ರೆಗೆ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ನಿನ್ನೆ ಉತ್ತರ ಪ್ರದೇಶಕ್ಕೆ ಪ್ರವೇಶಿಸಿದ್ದ ಯಾತ್ರೆಯನ್ನು ಲೋನಿ ಗಡಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ವಾಗತಿಸಿದ್ದರು.