ಸಾಗರ್(ಮಧ್ಯಪ್ರದೇಶ), ಜ 04 (DaijiworldNews/DB): ವ್ಯಕ್ತಿಯೊಬ್ಬರ ಮೇಲೆ ಕಾರು ಹರಿಸಿದ ಘಟನೆ ಸಂಬಂಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅಮಾನತುಗೊಂಡ ಬಿಜೆಪಿ ಮುಖಂಡ ಮಿಶ್ರಿ ಚಂದ್ ಗುಪ್ತಾ ಅವರ ಅನಧಿಕೃತ ಹೊಟೇಲ್ನ್ನು ಜಿಲ್ಲಾಡಳಿತ ನೆಲಸಮ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಡಿಸೆಂಬರ್ 22ರಂದು ಜಗದೀಶ್ ಯಾದವ್ ಎಂಬವರ ಮೇಲೆ ಬಿಜೆಪಿ ಮುಖಂಡ ಗುಪ್ತಾ ತನ್ನ ಎಸ್ಯುವಿ ಕಾರನ್ನು ಹರಿಸಿದ್ದರು. ಇದರಿಂದ ಯಾದವ್ ಅವರು ದಾರುಣವಾಗಿ ಸಾವನ್ನಪ್ಪಿದ್ದರು. ಘಟನೆ ಬಳಿಕ ಸಾರ್ವಜನಿಕರು ಗುಪ್ತಾ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದರು.
ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಸಾಗರ್ನಲ್ಲಿರುವ ಗುಪ್ತಾ ಒಡೆತನದ ಅನಧಿಕೃತ ಹೊಟೇಲ್ನ್ನು ನೆಲಸಮಗೊಳಿಸಲಾಗಿದೆ. ಕಟ್ಟಡವನ್ನು ಇಂದೋರ್ ನ ವಿಶೇಷ ತಜ್ಞರ ತಂಡ ಬರೋಬ್ಬರಿ 60 ಡೈನಾಮೇಟ್ಸ್ ಇಟ್ಟು ಸ್ಫೋಟಗೊಳಿಸಿತ್ತು
ಸಾಗರ್ ಜಿಲ್ಲಾಧಿಕಾರಿ ದೀಪಕ್ ಆರ್ಯ, ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ (ಡಿಐಜಿ) ತರುಣ್ ನಾಯಕ್ ಮೊದಲಾದವರು ಈ ವೇಳೆ ಹಾಜರಿದ್ದರು ಎಂದು ವರದಿಯಾಗಿದೆ.