ನವದೆಹಲಿ, ಜ 04 (DaijiworldNews/DB): ಅಗ್ನಿಪಥ್ ಯೋಜನೆಯಿಂದ ಸೇನೆಯ ಬಲವರ್ಧನೆಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಕ್ಷಣಾ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವಾಲಯಗಳು ಒಪ್ಪಂದಗಳು ಮತ್ತು ಎಂಒಯುಗಳಿಗೆ ಸಹಿ ಹಾಕಿದ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಸೇನೆಯ ಸಾಮರ್ಥ್ಯವನ್ನು ಅಗ್ನಿಪಥ್ ಯೋಜನೆ ಹೆಚ್ಚಿಸಲಿದೆ. ಅಲ್ಲದೆ ಮಹತ್ತರ ಬದಲಾವಣೆಗಳೊಂದಿಗೆ ಭಾರತೀಯ ಸಶಸ್ತ್ರ ಪಡೆಗಳನ್ನು ವಿಶ್ವ ಮಟ್ಟದಲ್ಲೇ ಉತ್ತಮವಾಗಿ ಪರಿವರ್ತಿಸುವ ಸಾಮರ್ಥ್ಯ ಇದಕ್ಕಿದೆ. ಬಲವರ್ಧಕಗಳಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ ಎಂದರು.
ಭವಿಷ್ಯದ ಸವಾಲು ಎದುರಿಸಲು ಉನ್ನತ ತಂತ್ರಜ್ಞಾನ, ಯುವಶಕ್ತಿಯನ್ನು ಬಳಸಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ ಎಂದವರು ಅಭಿಪ್ರಾಯಪಟ್ಟರು.
ಅಗ್ನಿಪಥ್ ಯೋಜನೆಯನ್ನು ಕಳೆದ ವರ್ಷ ಜೂನ್ನಲ್ಲಿ ಘೋಷಿಸಲಾಗಿತ್ತು. ಈ ಯೋಜನೆ ಮುಖಾಂತರ ಭಾರತೀಯ ಸೇನೆಗೆ 20,000, ವಾಯುಸೇನೆ ಮತ್ತು ನೌಕಾಸೇನೆಗೆ ತಲಾ 3000ದಂತೆ ಒಟ್ಟೂ 26 ಸಾವಿರ ಅಗ್ನಿವೀರರನ್ನು ಆಯ್ಕೆ ಮಾಡಲಾಗಿದ್ದು, ಇವರೆಲ್ಲರೂ ತರಬೇತಿ ಪಡೆಯುತ್ತಿದ್ದಾರೆ. ಒಟ್ಟು ಆಯ್ಕೆಯಾದವರ ಪೈಕಿ ಶೇ. 25 ಮಂದಿ ನಾಲ್ಕು ವರ್ಷಗಳ ಅವಧಿ ಮುಗಿದ ಬಳಿಕ ಒಟ್ಟು 15 ವರ್ಷಗಳ ಕಾಲ ಸೇವೆಯಲ್ಲಿ ಇರಲಿದ್ದಾರೆ. ಉಳಿದವರು ಸೇವಾ ನಿಧಿ ನಿರ್ಗಮನ ಪ್ಯಾಕೇಜ್ನೊಂದಿಗೆ ತಲಾ 11.71 ಲಕ್ಷ ರೂ.ಗಳನ್ನು ಪಡೆದುಕೊಳ್ಳಲಿದ್ದಾರೆ.