ಲಕ್ನೊ, ಜ 03 (DaijiworldNews/DB): ಎಲ್ಲವನ್ನೂ ಖರೀದಿಸಿರುವ ಅದಾನಿ, ಅಂಬಾನಿಗೆ ನನ್ನ ಸಹೋದರನನ್ನು ಖರೀದಿಸಲು ಎಂದಿಗೂ ಸಾಧ್ಯವಾಗದು. ಏಕೆಂದರೆ ಅವರು ಸತ್ಯದ ಪರವಾಗಿ ನಿಂತಿದ್ದಾರೆ ಎಂದು ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಉತ್ತರ ಪ್ರದೇಶಕ್ಕೆ ಪ್ರವೇಶಿಸಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ರಾಹುಲ್ ಗಾಂಧಿ ಟಿ ಶರ್ಟ್ ಧರಿಸಿಯೇ ಪಾದಯಾತ್ರೆ ಮಾಡುತ್ತಾರೆ. ಅವರಿಗೆ ಚಳಿಯಾಗುವುದಿಲ್ಲ. ಏಕೆಂದರೆ ಅವರು ಸತ್ಯದ ಕವಚ ಧರಿಸಿದ್ದಾರೆ. ಅವರನ್ನು ಖರೀದಿಸಲು ಅದಾನಿ, ಅಂಬಾನಿಗೆ ಎಂದಿಗೂ ಸಾಧ್ಯವಾಗದು ಎಂದರು.
ಕೋಟ್ಯಾಂತರ ರೂ. ಖರ್ಚು ಮಾಡಿ ಕೇಂದ್ರ ಸರ್ಕಾರ ರಾಹುಲ್ ಪ್ರತಿಷ್ಠೆ ನಾಶಪಡಿಸಿದೆ. ಆದರೆ ಆತನೊಬ್ಬ ಯೋಧ, ಸತ್ಯದ ಹಾದಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದವರು ಪ್ರಶಂಸಿಸಿದರು.
ದೆಹಲಿಯಲ್ಲಿದ್ದ ಭಾರತ್ ಜೋಡೋ ಯಾತ್ರೆಯು ಇಂದು ಉತ್ತರ ಪ್ರದೇಶ ತಲುಪಿದೆ. ಸಾವಿರಾರು ಮಂದಿ ಕಾರ್ಯಕರ್ತರು ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಲು ಉತ್ಸುಕರಾಗಿದ್ದಾರೆ. ಭಾರತ್ ಜೋಡೋ ಯಾತ್ರೆ ಮುಗಿದ ಬಳಿಕ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ 'ಹಾಥ್ ಸೇ ಹಾಥ್ ಜೋಡೋ' ಯಾತ್ರೆ ಆರಂಭಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.