ಕೋಲ್ಕತ್ತಾ, ಜ 03 ( DaijiworldNews/MS): ಮೃತಪಟ್ಟ ಪತ್ನಿಯ ನೆನಪಿಗಾಗಿ ಪ್ರತಿಕೃತಿ ನಿರ್ಮಿಸಿ ಕೋಲ್ಕತ್ತಾದ ವ್ಯಕ್ತಿಯೊಬ್ಬರು " ನಮ್ಮ ಪ್ರೀತಿ ಎಂದಿಗೂ ಅಜರಾಮರ" ಎಂದಿದ್ದಾರೆ.
ಕೋಲ್ಕತ್ತಾದ ಕೈಖಾಲಿಯ ನಿವಾಸಿ, ನಿವೃತ್ತ ಸರ್ಕಾರಿ ನೌಕರ ತಪಸ್ ಸ್ಯಾಂಡಿಲ್ಯ (65) ಇವರು ಕೋವಿಡ್ -19 ಸಾಂಕ್ರಾಮಿಕ ಎರಡನೇ ಅಲೆಯ ಸಮಯದಲ್ಲಿ ತಮ್ಮ ಪತ್ನಿ ಇಂದ್ರಾಣಿಯನ್ನು ಕಳೆದುಕೊಂಡು ನೋವು ಅನುಭವಿಸುತ್ತಿದ್ದರು. ಪ್ರೀತಿಯ ಪತ್ನಿಯ ಅಗಲಿಕೆಯ ಬಳಿಕ ಇದೀಗ 2.5 ಲಕ್ಷ ರೂಪಾಯಿ ವ್ಯಯಿಸಿ , ಪತ್ನಿಯ ಸಿಲಿಕಾನ್ ಪ್ರತಿಮೆಯನ್ನು ತಮ್ಮ ಮನೆಯಲ್ಲಿ ಸ್ಥಾಪಿಸಿದ್ದಾರೆ.
30 ಕೆಜಿ ತೂಕವುಳ್ಳ ಈ ಪ್ರತಿಮೆಯು ವಿಐಪಿ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಇಂದ್ರಾಣಿ ಅವರ ನೆಚ್ಚಿನ ಸ್ಥಳದಲ್ಲಿ ಸೋಫಾದಲ್ಲಿ ಪ್ರತಿಷ್ಟಾಪಿಸಿದ್ದಾರೆ. ಇಂದ್ರಾಣಿ ಜೀವಂತವಾಗಿದ್ದಾಗ ತುಂಬಾ ಇಷ್ಟಪಟ್ಟ ಚಿನ್ನಾಭರಣ, ಮಗನ ಮದುವೆಯ ಆರತಕ್ಷತೆಯಲ್ಲಿ ಧರಿಸಿದ ನೆಚ್ಚಿನ ಅಸ್ಸಾಂನ ರೇಷ್ಮೆ ಸೀರೆಯಲ್ಲಿ ಪ್ರತಿಮೆಯನ್ನು ಅಲಂಕಾರಗೊಳಿಸಲಾಗಿದೆ.
ನಾವು ಒಂದು ದಶಕದ ಹಿಂದೆ ಮಾಯಾಪುರದ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿದ್ದೆವು. ಅಲ್ಲಿ ಭಕ್ತಿವೇದಾಂತ ಸ್ವಾಮಿಯ ಜೀವಂತ ಪ್ರತಿಮೆಯನ್ನು ನಾವಿಬ್ಬರು ಇಷ್ಟಪಟ್ಟೆವು. ಈ ವೇಳೆ ಪತ್ನಿ ಇಂದ್ರಾಣಿ ಅವರು ನಾನು ನಿಮಗಿಂತ ಮುಂಚೆಯೇ ಮೃತಪಟ್ಟರೆ ಇಂತಹ ಪ್ರತಿಮೆಯ ನಿರ್ಮಿಸಿ ಎಂದು ಆಸೆಯನ್ನು ನನಗೆ ತಿಳಿಸಿದ್ದರು, ”ಎಂದು ಹೇಳಿದ್ದು ನಾನು ಇದನ್ನು ಅಕ್ಷರಶಃ ಪಾಲಿಸಿದ್ದೇನೆ ಎನ್ನುತ್ತಾರೆ ತಪಸ್ ಸ್ಯಾಂಡಿಲ್ಯ.