ದೆಹಲಿ, ಜ 03 ( DaijiworldNews/MS): ಕ್ರಿಕೆಟಿಗ ರಿಷಭ್ ಪಂತ್ ಅವರ ಕಾರು ಅಪಘಾತಕ್ಕೀಡಾದ ರಸ್ತೆಯಲ್ಲಿ ಯಾವುದೇ ಗುಂಡಿಗಳಿರಲಿಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಪಘಾತ ಸಂಭವಿಸಿದ ರಸ್ತೆಯಲ್ಲಿ ಯಾವುದೇ ಹೊಂಡಗಳಿಲ್ಲ, ಹೆದ್ದಾರಿಗೆ ಹೊಂದಿಕೊಂಡಿರುವ ಕಾಲುವೆ (ರಾಜ್ವಾಹಾ) ಇರುವ ಕಾರಣ ಕಾರು ಅಪಘಾತಕ್ಕೊಳಗಾದ ರಸ್ತೆ ಕೊಂಚ ಕಿರಿದಾಗಿದೆ ಎಂದು ಎನ್ಎಚ್ಎಐ ರೂರ್ಕಿ ವಿಭಾಗದ ಯೋಜನಾ ನಿರ್ದೇಶಕ ಪ್ರದೀಪ್ ಸಿಂಗ್ ಗುಸೇನ್ ಹೇಳಿದ್ದಾರೆ.
ಶುಕ್ರವಾರ ರಿಷಭ್ ಪಂತ್ ಅವರ ಮರ್ಸಿಡಿಸ್ ಕಾರು ಉತ್ತರಾಖಂಡ ರಾಜ್ಯದ ರೂರ್ಕಿ ಬಳಿ ಅಪಘಾತಕ್ಕೀಡಾಗಿತ್ತು. ಮುಂಜಾನೆ 5.30ರ ಸುಮಾರಿಗೆ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು, ತಡೆಗೋಡೆಗೆ ಒರೆಸಿಕೊಂಡು ಹೋಗಿತ್ತು. ಘರ್ಷಣೆಗೆ ಕಾರಿಗೆ ಬೆಂಕಿ ತಗುಲಿ ಉರಿದಿತ್ತು.
ಅಪಘಾತದ ಬಳಿಕ ರಸ್ತೆಯಲ್ಲಿದ್ದ ಗುಂಡಿಯನ್ನು ಎನ್ಎಚ್ಎಐ ದುರಸ್ತಿ ಮಾಡಿದೆ ಎಂಬ ಆರೋಪ ಕೇಳಿಬಂದಿದ್ದು ಈ ಮಾತನ್ನು ಗುಸೇನ್ ನಿರಾಕರಿಸಿದ್ದಾರೆ.