ನವದೆಹಲಿ, ಜ 03 (DaijiworldNews/DB): ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಮೂರು ಅಗ್ರ ರಾಷ್ಟ್ರಗಳ ಪೈಕಿ ಭಾರತವೂ ಒಂದು. ವಿಜ್ಞಾನ ರಂಗವು ಭಾರತವನ್ನು ಆತ್ಮನಿರ್ಭರ್ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ನ ಅಧಿವೇಶನವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, 130 ದೇಶಗಳ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 2015ರವರೆಗೆ 81 ನೇ ಸ್ಥಾನದಲ್ಲಿದ್ದ ನಾವು 2022ರಲ್ಲಿ 40ನೇ ಸ್ಥಾನದಲ್ಲಿದ್ದೇವೆ ಎಂದರು.
ದೇಶದ ಬೆಳವಣಿಗೆಯಲ್ಲಿ ವಿಜ್ಞಾನ ಕ್ಷೇತ್ರದ ಕೊಡುಗೆ ದೊಡ್ಡದು. ಈ ಕ್ಷೇತ್ರವು ದೇಶವನ್ನು ಆತ್ಮನಿರ್ಭರ್ ಮಾಡುವಲ್ಲಿ ಸಹಕಾರಿಯಾಗುತ್ತಿದೆ. ಪ್ರಯೋಗಾಲಯದಿಂದ ಪ್ರಾಯೋಗಿಕ ಕಾರ್ಯಗಳು ನಡೆದಾಗ ವಿಜ್ಞಾನದ ಪ್ರಯತ್ನಗಳು ಫಲಿಸುತ್ತವೆ. ಭಾರತವನ್ನು ಬಲಿಷ್ಠಗೊಳಿಸುವ ಆವಿಷ್ಕಾರಗಳು ಈ ಕ್ಷೇತ್ರದಲ್ಲಿ ನಡೆಯಬೇಕು. ಹಾಗಾದಲ್ಲಿ ಜಾಗತಿಕ ಜನಸಂಖ್ಯೆಯನ್ನು ಸಬಲೀಕರಣಗೊಳಿಸುವುದೂ ಸಾಧ್ಯವಿದೆ ಎಂದವರು ಅಭಿಪ್ರಾಯಪಟ್ಟರು.
2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಸಿರಿಧಾನ್ಯಗಳ ಬಳಕೆ ಸುಧಾರಣೆಗೆ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದವರು ಇದೇ ವೇಳೆ ಆಶಿಸಿದರು.