ನವದೆಹಲಿ, ಜ 03 (DaijiworldNews/HR): ನಗರದ ಹೊರಭಾಗದ ಸುಲ್ತಾನ್ಪುರಿಯಲ್ಲಿನ ಭಾನುವಾರ ನಡೆದ ಭೀಕರ ಅಪಘಾತ ನಡೆದು ಮೃತದೇಹವನ್ನು ಕಾರಿನಡಿ ಸುಮಾರು 4 ಕಿ.ಮೀ.ವರೆಗೂ ಎಳೆದೊಯ್ದಿರುವ ಘಟನೆ ಸಂಬಂಧ ಪೊಲೀಸರು ಮತ್ತೊಂದು ಸಿಸಿಟಿವಿ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಅಪಘಾತದ ಸಮಯದಲ್ಲಿ ಮೃತ ಯುವತಿ ಒಬ್ಬಂಟಿಯಾಗಿರಲಿಲ್ಲ ಆಕೆಯ ಸ್ನೇಹಿತೆಯೂ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲಿಗೆ ಮೃತ ಯುವತಿ ಒಬ್ಬಳೇ ಸ್ಕೂಟಿಯಲ್ಲಿ ಹೋಗುತ್ತಿದ್ದಳು ಎಂದು ವರದಿಯಾಗಿತ್ತು. ಆದರೆ ಇದೀಗ ಸಿಸಿಟಿವಿ ವಿಡಿಯೋ ಗಮನಿಸಿದ ಬಳಿಕ ಆಕೆಯೊಂದಿಗೆ ಮತ್ತೊಬ್ಬಳು ಇದ್ದು ಆಕೆ ಅಪಘಾತದ ಸಮಯದಲ್ಲಿ ಗಾಯಗೊಂಡು ಪಾರಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಯುವತಿಯ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯವು ಸೋಮವಾರ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದು, ಮಾರುತಿ ಬಲೆನೊ ಕಾರಿನಲ್ಲಿದ್ದ ಐವರನ್ನು ಬಂಧಿಸಿದ ದೆಹಲಿ ಪೊಲೀಸರು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ 20 ವರ್ಷದ ಯುವತಿಯೊಬ್ಬರು ಮೃತಪಟ್ಟಿದ್ದು, ಕಾರಿನಡಿ ಸಿಲುಕಿದ್ದ ಆಕೆಯ ಮೃತದೇಹವನ್ನು ಸುಮಾರು 4 ಕಿ.ಮೀ.ವರೆಗೂ ಎಳೆದೊಯ್ದಿತ್ತು. ರಸ್ತೆಯ ಮೇಲೆ ಯುವತಿಯ ಮೃತದೇಹ ನಗ್ನಾವಸ್ಥೆಯಲ್ಲಿ ಬಿದ್ದಿರುವ, ಆಕೆಯ ಕಾಲುಗಳು ಮುರಿದಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡಿತ್ತು.