ನವದೆಹಲಿ, ಜ 03 (DaijiworldNews/DB): ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಇಂದು ಉತ್ತರ ಪ್ರದೇಶ ಪ್ರವೇಶಿಸಲಿದೆ. ಒಂಬತ್ತು ದಿನಗಳ ವಿರಾಮದ ಬಳಿಕ ದೆಹಲಿಯ ಹನ್ಮಾನ್ ಮಂದಿರದಿಂದ ಯಾತ್ರೆ ಪುನರಾರಂಭಗೊಂಡು ಮಧ್ಯಾಹ್ನ ವೇಳೆಗೆ ಉತ್ತರ ಪ್ರದೇಶದ ಗಾಜಿಯಾಬಾದ್ ಪ್ರವೇಶಗೈಯಲಿದೆ.
ರಾಹುಲ್ ಗಾಂಧಿಯವರು ಭಾಗಪತ್ನ ಮವಿಕಲಾ ಗ್ರಾಮದಲ್ಲಿ ರಾತ್ರಿ ಉಳಿದುಕೊಳ್ಳಲಿದ್ದಾರೆ. ಜನವರಿ 4ರ ತನಕ ಉತ್ತರ ಪ್ರದೇಶದಲ್ಲಿದ್ದು, ಅಂದು ಶಾಮ್ಲಿ ಮೂಲಕ ಹಾದು ಹೋಗಿ ಜನವರಿ 5ರ ಸಂಜೆ ಪಾಣಿಪತ್ನ ಸನೌಲಿ ಮೂಲಕಹರಿಯಾಣಕ್ಕೆ ಪ್ರವೇಶಲಿದೆ. ಜನವರಿ 26ರಂದು ಶ್ರೀನಗರಕ್ಕೆ ಯಾತ್ರೆ ತಲುಪಲಿದೆ.
ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆ ಈವರೆಗೆ 110ಕ್ಕೂ ಹೆಚ್ಚು ದಿನ ಪೂರೈಸಿದೆ. 3,000 ಕಿ.ಮೀ. ದೂರವನ್ನು ಈವರೆಗೆ ಕ್ರಮಿಸಲಾಗಿದೆ. ಈ ಯಾತ್ರೆ ಮುಕ್ತಾಯಗೊಂಡ ಬಳಿಕ ಹಾಥ್ ಸೆ ಹಾಥ್ ಜೋಡೊ ಅಭಿಯಾನ ಕಾಂಗ್ರೆಸ್ನಿಂದ ಆರಂಭವಾಗಲಿದೆ. ಇದರಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಿಳಾ ಸದಸ್ಯರೊಂದಿಗೆ ರ್ಯಾಲಿ ಮತ್ತು ಪಾದಯಾತ್ರೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.