ಬಳ್ಳಾರಿ, ಜ 02 ( DaijiworldNews/MS): ಮಾಜಿ ಸಚಿವ ಜನಾರ್ದನರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಣೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಸಹೋದರ ಕರುಣಾಕರ ರೆಡ್ಢಿ ಕೂಡಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಜನಾರ್ಧನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಬಳ್ಳಾರಿ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರೆ, ನಾನು ಬಿಜೆಪಿಯಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿದ್ದಾರೆ.
ಪಕ್ಷ ಹೇಳಿದ ಕೆಲಸ ಮಾಡುವುದು ನನ್ನ ಕರ್ತವ್ಯ, ಯಾರೂ ಬೇಕಾದರೂ ಪಕ್ಷ ಕಟ್ಟಬಹುದು, ಸ್ಪರ್ಧೆ ಮಾಡಬಹುದು. ಆದರೆ ನಾನು ಬಿಜೆಪಿಯಲ್ಲೇ ಇರುತ್ತೇನೆ. ಟಿಕೆಟ್ ನೀಡಿದರೆ ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಿಜೆಪಿಯ ಸೋಮಶೇಖರ್ ರೆಡ್ಡಿ ಶಾಸಕರಾಗಿದ್ದಾರೆ.
ಡಿಸೆಂಬರ್ 25 ರ ಭಾನುವಾರದಂದು ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದರು. 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ದ ಮೂಲಕ ಮುಂದೆ ಬರುವ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದರು. ಇದೇ ವೇಳೆ ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ರೆಡ್ಡಿ, ಯಡಿಯೂರಪ್ಪ ನಾವು ಒಟ್ಟಿಗೆ ಪ್ರಯಾಣ ಬೆಳೆಸಿದ್ದೆವು, ಎಂದೂ ಬೇರೆಯಾಗಿಲ್ಲ. ಅವರಿಗೆ ನಾನು ತಂದೆ ಸ್ಥಾನದ ಗೌರವ ಕೊಟ್ಟಿದ್ದೇನೆ. ಹಾಗೆಯೇ ಶ್ರೀರಾಮುಲು ಮತ್ತು ಸಹೋದರರಿಗೆ ಬಿಜೆಪಿ ತೊರೆದು ನನ್ನ ಜೊತೆ ಬರುವಂತೆ ಒತ್ತಡ ಹಾಕಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದರು.