ಜೋಧ್ಪುರ , ಜ 02 ( DaijiworldNews/MS): ಜೋಧ್ಪುರ ಸೂರ್ಯನಗರಿ ಎಕ್ಸ್ ಪ್ರೆಸ್ ರೈಲಿನ ಎಂಟು ಬೋಗಿಗಳು ಹಳಿ ತಪ್ಪಿದ ಘಟನೆ ರಾಜಸ್ಥಾನದ ಪಾಲಿ ಬಳಿ ಸೋಮವಾರ ಮುಂಜಾನೆ ನಡೆದಿದೆ.
ಬಾಂದ್ರಾ ಟರ್ಮಿನಸ್ ನಿಂದ ಹೊರಟ ರೈಲು ಜೋಧ್ ಪುರಕ್ಕೆ ತೆರಳುತ್ತಿತ್ತು. ಈ ವೇಳೆ ಜೋಧ್ಪುರ ವಿಭಾಗದ ರಾಜ್ಕಿವಾಸ್-ಬೊಮದ್ರಾ ಟರ್ಮಿನಸ್ ನಡುವೆ ಮುಂಜಾನೆ 3:27ರ ವೇಳೆ ರೈಲು ಹಳಿ ತಪ್ಪಿದ್ದು , ಯಾವುದೇ ಸಾವುನೋವಿನ ವರದಿಯಾಗಿಲ್ಲ.
“ಬಾಂದ್ರಾ ಟರ್ಮಿನಸ್-ಜೋಧ್ಪುರ ಸೂರ್ಯನಗರಿ ಎಕ್ಸ್ಪ್ರೆಸ್ ರೈಲು ಹಳಿತಪ್ಪಿದ ಕಾರಣ 11 ಬೋಗಿಗಳ ಮೇಲೆ ಪರಿಣಾಮ ಬೀರಿವೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆಯಿಂದ ಅಸ್ತವ್ಯಸ್ತವಾದ ಪ್ರಯಾಣಿಕರಿಗೆ ತಮ್ಮ ತಮ್ಮ ಊರು ತಲುಪಲು ಬಸ್ಗಳ ವ್ಯವಸ್ಥೆ ಮಾಡಲಾಗಿದೆ ”ಎಂದು ವಾಯುವ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
"ಮಾರ್ವಾರ್ ಜಂಕ್ಷನ್ನಿಂದ ಹೊರಟ 5 ನಿಮಿಷಗಳಲ್ಲಿ ರೈಲಿನೊಳಗೆ ಕಂಪನದ ಶಬ್ದ ಕೇಳಿಸಿದ್ದು ಬಳಿಕ 2-3 ನಿಮಿಷಗಳ ನಂತರ ರೈಲು ಚಲನೆ ಸ್ಥಗಿತಗೊಂಡಿದೆ. ಕೆಳಗಿಳಿದು ನೋಡಿದಾಗ ಕನಿಷ್ಠ 8 ಸ್ಲೀಪರ್ ಕ್ಲಾಸ್ ಕೋಚ್ಗಳು ಹಳಿತಪ್ಪಿದ್ದವು. 15-20 ನಿಮಿಷಗಳೊಳಗೆ ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಬಂದವು" ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.