ಅಂಕೋಲಾ, ಜ. 01 ( DaijiworldNews/MS): ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರು ನಡುವೆ
ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಅಂಕೋಲಾ ಪಟ್ಟಣ ಬಾಳೆಗುಳಿ ಕ್ರಾಸ್ ಸಮೀಪದ ವರದರಾಜ ಹೊಟೇಲ್
ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರವಿವಾರ ನಡೆದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಕಾರಿನ ನೋಂದಣಿ ಆಧಾರದ ಮೇಲೆ ತಮಿಳುನಾಡು ಮೂಲದವರು ಎಂದು ತಿಳಿದುಬಂದಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.
ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಕಾರು ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದೆ. ಕಾರು ರಸ್ತೆ ಡಿವೈಡರ್ ದಾಟಿ ಅಂಕೋಲಾ ಕಡೆಯಿಂದ ನವಲಗುಂದಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ಸಿಗೆ
ಜೋರಾಗಿ ಗುದ್ದಿದೆ ಎನ್ನಲಾಗಿದೆ.
ಗುದಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ನಾಲ್ವರು
ಪ್ರಯಾಣಿಕರು ಮೃತಪಟ್ಟಿದ್ದು, ಅವರಲ್ಲಿ ಓರ್ವ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು
ಹೇಳಲಾಗಿದೆ.
ನುಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿಕೊಂಡಿದ್ದ ಕೆಲವರನ್ನು ಪೊಲೀಸರು ಕಬ್ಬಿಣದ ಸಲಾಕೆ ಬಳಸಿ ಕಾರಿನ ಬಾಗಿಲು ಒಡೆದು ಹೊರ ತೆಗೆದಿದ್ದಾರೆ ಎಂದು ಹೇಳಲಾಗಿದೆ.