ಪಟ್ನಾ, ಜ 01 (DaijiworldNews/HR): ಈ ದೇಶಕ್ಕಾಗಿ ನವ ಭಾರತದ ರಾಷ್ಟ್ರಪಿತ ಏನು ಮಾಡಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಪತ್ನಿ ಅಮೃತಾ ಫಡಣವೀಸ್ ಅವರು ಪ್ರಧಾನಿ ನರೇಂದ್ರ ಮೋದಿ ಭಾರತದ ಅಧುನಿಕ ರಾಷ್ಟ್ರಪಿತ ಎಂದು ಕರೆದಿದ್ದು, 'ಭಾರತ ಇಬ್ಬರು ರಾಷ್ಟ್ರಪಿತರನ್ನು ಹೊಂದಿದೆ ಎಂಬುದು ನನ್ನ ದೃಢವಾದ ಅಭಿಪ್ರಾಯ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನವ ಭಾರತದ ರಾಷ್ಟ್ರಪಿತ ಹಾಗೂ ಮಹಾತ್ಮ ಗಾಂಧಿ ಹಿಂದಿನ ಭಾರತದ ರಾಷ್ಟ್ರಪಿತ' ಎಂದು ಹೇಳಿಕೆ ನೀಡಿದ್ದರು. ಇದನ್ನು ಉಲ್ಲೇಖಿಸಿ ಮಾತನಾಡಿರುವ ನಿತೀಶ್ ಕುಮಾರ್, ಸ್ವಾತಂತ್ರ್ಯ ಹೋರಾಟಕ್ಕೂ ಆರ್ಎಸ್ಎಸ್ಗೂ ಯಾವುದೇ ಸಂಬಂಧವಿಲ್ಲ. ಆದರೂ ನಾವು ಇತ್ತೀಚೆಗೆ ನವ ಭಾರತದ ರಾಷ್ಟ್ರಪಿತ ಎಂಬ ಹೇಳಿಕೆಯನ್ನು ಎಲ್ಲಕಡೇ ಕೇಳುತ್ತಿದ್ದೇವೆ. ಹಾಗಾದರೆ ಭಾರತದ ನವ ರಾಷ್ಟ್ರಪಿತ ಈ ದೇಶಕ್ಕಾಗಿ ಏನು ಮಾಡಿದ್ದಾರೆ?' ಎಂದು ಪ್ರಶ್ನಿಸಿದ್ದಾರೆ.
ಇನ್ನು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಆರ್ಎಸ್ಎಸ್ ಯಾವ ಕೊಡುಗಡೆಯನ್ನು ನೀಡಿಲ್ಲ. ಸ್ವಾತಂತ್ರ್ಯ ನಂತರದಲ್ಲಿ ಹುಟ್ಟಿದವರು ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್ಎಸ್ಎಸ್ ಕೊಡುಗೆ ಏನೂ ಇಲ್ಲ ಎಂಬುದು ಇತಿಹಾಸ ನೋಡಿದರು ತಿಳಿಯುತ್ತದೆ ಎಂದು ಹೇಳಿದ್ದಾರೆ.