ಮುಂಬೈ, ಜ 01 (DaijiworldNews/DB): ರಾಹುಲ್ ಗಾಂಧಿಯವರ ನಾಯಕತ್ವ ಕಳೆದ ವರ್ಷದಂತೆ ಈ ವರ್ಷವೂ ಮುಂದುವರಿದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದ ರಾಜಕೀಯ ಹೊಸ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದು ಉದ್ಧವ್ ಠಾಕ್ರೆ ಬಣದ ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಸೇನಾ ಮುಖವಾಣಿ 'ಸಾಮ್ನಾ'ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ ರೋಖ್ಥೋಕ್ನಲ್ಲಿ ಬರೆದುಕೊಂಡಿರುವ ಅವರು, ರಾಹುಲ್ ಗಾಂಧಿ ಅವರು 2023ರಲ್ಲಿ ಉತ್ತಮ ನಾಯಕತ್ವಕ್ಕೆ ಬುನಾದಿ ಹಾಕಿದ್ದಾರೆ. ಆ ಮೂಲಕ ಹೊಸ ಹೊಳಪೊಂದು ಅವರ ನಾಯಕತ್ವಕ್ಕೆ ಸಿಕ್ಕಿದೆ ಎಂದಿದ್ದಾರೆ.
ಮೋದಿ, ಅಮಿತ್ ಶಾ ಅವರು ದೇಶದಲ್ಲಿ ದ್ವೇಷ, ವಿಭಜನೆಯ ಬೀಜ ಬಿತ್ತಬಾರದು. ರಾಮ ಮಂದಿರ ವಿವಾದ ಮುಗಿದಿರುವುದರಿಂದ ಬಿಜೆಪಿಗೆ ಈ ವಿಚಾರವನ್ನಿಟ್ಟುಕೊಂಡು ಮತ ಕೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಲವ್ ಜಿಹಾದ್ ಅಸ್ತ್ರವನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದವರು ಕಿಡಿ ಕಾರಿದರು.
2023ರಲ್ಲಿ ದೇಶ ಹೊಸ ಬದಲಾವಣೆಯನ್ನು ಕಾಣಲಿದೆ. ಭಯದಿಂದ ಮುಕ್ತಗೊಳ್ಳಲಿದೆ. ಈಗ ನಡೆಯುತ್ತಿರುವುದೆಲ್ಲ ಅಧಿಕಾರ ರಾಜಕಾರಣಕ್ಕಾಗಿ. ಮುಂದೆ ಇಂತಹ ಪರಿಸ್ಥಿತಿಗಳು ದೇಶದಲ್ಲಿ ಇರುವುದಿಲ್ಲ ಎಂದು ಭವಿಷ್ಯ ನುಡಿದ ಅವರು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ತನ್ನ ಉದ್ದೇಶ ಸಾಧಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
2022ರ ಸೆಪ್ಟಂಬರ್ನಲ್ಲಿ ಭಾರತ್ ಜೋಡೋ ಯಾತ್ರೆ ಪ್ರಾರಂಭವಾದ ದಿನದಿಂದ ನಿರಂತರವಾಗಿ ರಾಹುಲ್ ಗಾಂಧಿಯವರು ಉತ್ಸಾಹದಿಂದ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಆ ಮೂಲಕ ಅವರ ನಾಯಕತ್ವವು ಹೊಸದಾದ ಹೊಳಪೊಂದನ್ನು ಈ ದೇಶದಲ್ಲಿ ಹುಟ್ಟು ಹಾಕಿದೆ. ಅವರ ನಾಯಕತ್ವದ ಹೊಳಪು 2023ರಲ್ಲಿಯೂ ಇದೇ ರೀತಿ ಮುಂದುವರಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದ ರಾಜಕಾರಣವು ಹೊಸ ಬದಲಾವಣೆಯೊಂದನ್ನು ಕಾಣಬಹುದು ಎಂದು ಪ್ರತಿಪಾದಿಸಿದರು.