ಮುಂಬೈ, ಜ 01 (DaijiworldNews/DB): ಸಾಕು ಶ್ವಾನವೊಂದರ ಹೃದ್ರೋಗದ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಯಿಂದ ವೈದ್ಯರೊಬ್ಬರು ಆಗಮಿಸಿದ ವಿಶೇಷ ವಿದ್ಯಾಮಾನ ಮುಂಬೈನಲ್ಲಿ ನಡೆದಿದೆ.
ಜುಹು ಪ್ರದೇಶದ ಕುಟುಂಬವೊಂದು ಸಾಕಿದ್ದ ಮಲ್ಟೆಸ್ ಜಾತಿಯ ನಾಲ್ಕು ವರ್ಷದ ವಾಫ್ಲೆ ಹೆಸರಿನ ಶ್ವಾನಕ್ಕೆ ಹುಟ್ಟುವಾಗಲೇ ಹೃದ್ರೋಗ ಸಮಸ್ಯೆ ಇದ್ದುದರಿಂದ ಜೀವಕ್ಕೇ ಅಪಾಯವಿತ್ತು. ಈ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಸ್ಥಳೀಯ ವೈದ್ಯರೊಂದಿಗೆ ಮನೆಯವರು ಜಪಾನ್ನಿಂದ ವೈದ್ಯನನ್ನು ಆಹ್ವಾನಿಸಿದ್ದರು. ಇದೀಗ ಯಶಸ್ವಿಯಾಗಿ ಶ್ವಾನಕ್ಕೆ ಶಸ್ತ್ರಚಿಕಿತ್ಸೆ ನಡೆದಿದೆ.
ಜುಹು ನಿವಾಸಿ ರಾಣಿ ರಾಜ್ ವಂಕವಲ್ಲಾ ಅವರಿಗೆ ಉಡುಗೊರೆಯಾಗಿ ಬಂದಿದ್ದ ಈ ಶ್ವಾನವನ್ನು ಮೊದಲ ಬಾರಿ ಹಿಡಿದಾಗ ಅದರ ಶ್ವಾಸದಲ್ಲಿ ಅಸಹಜ ಕಂಪನ ಮತ್ತು ಶಬ್ದ ಕೇಳಿ ಬಂದಿತ್ತು. ಕೂಡಲೇ ಅದನ್ನು ವೈದ್ಯರ ಬಳಿ ಕೊಂಡೊಯ್ದು ಪರೀಕ್ಷಿಸಿದಾಗ ಅದಕ್ಕೆ ಹೃದ್ರೋಗ ಸಮಸ್ಯೆ ಇರುವುದು ಗೊತ್ತಾಗಿತ್ತು. ಅಲ್ಲದೆ ಭಾರತದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ಅಲ್ಲದೆ, ಇಂತಹ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದು ಕಡಿಮೆ. ಹಾಗಾಗಿ ಯಾವುದೇ ದೊಡ್ಡ ಗಾಯಗಳಿಲ್ಲದೆ ಶಸ್ತ್ರಚಿಕಿತ್ಸೆ ನಡೆಸಲು ಶ್ವಾನವನ್ನು ಜರ್ಮನ್ಗೆ ಕೊಂಡೊಯ್ಯಬೇಕೆಂದು ಪಶುವೈದ್ಯೆ ಡಾ.ದೀಪ್ತಿ ದೇಶಪಾಂಡೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶ್ವಾನವನ್ನು ಇಂಗ್ಲೆಂಡ್ಗೆ ಕೊಂಡೊಯ್ಯಲು ಕುಟುಂಬ ನಿರ್ಧರಿಸಿತ್ತಾದರೂ, ಕೋವಿಡ್ ಅದಕ್ಕೆ ಅಡ್ಡಿಯಾಗಿತ್ತು.
ಬಳಿಕ ಜರ್ಮನಿಯ ಶಸ್ತ್ರಚಿಕಿತ್ಸಕ ಡಾ. ಮಥಾಯಿಸ್ ಫ್ರಾಂಕ್ ಅವರನ್ನು ಡಾ. ದೀಪ್ತಿ ಸಂಪರ್ಕಿಸಿದರು. ಜರ್ಮನ್ನಿಂದ ಭಾರತಕ್ಕೆ ಆಗಮಿಸಿದ ಡಾ. ಮಥಾಯಿಸ್ ಡಾ. ಮಕರಂದ್ ಚೌಸಾಲ್ಕರ್ ಅವರ ಕ್ಲಿನಿಕ್ನಲ್ಲಿ ಶ್ವಾನಕ್ಕೆ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಇದೀಗ ಶಸ್ತ್ರಚಿಕಿತ್ಸೆಗೊಳಗಾಗಿ ಒಂದು ತಿಂಗಳ ಬಳಿಕ ವಾಫ್ಲೆ ತನ್ನ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ.