ಶಿವಮೊಗ್ಗ, ಜ 01 (DaijiworldNews/DB): ಹೊಸ ವರ್ಷ ಹಾಗೂ ಮಗನ 30ನೇ ಹುಟ್ಟುಹಬ್ಬವನ್ನು ಸ್ವಾಗತಿಸಲು ವ್ಯಕ್ತಿಯೊಬ್ಬರು ಮಧ್ಯರಾತ್ರಿ ಆಕಾಶಕ್ಕೆ ಗಾಳಿಯಲ್ಲಿ ಗುಂಡು ಹಾರಿಸಲೆತ್ನಿಸಿದಾಗ ಪುತ್ರನ ಸ್ನೇಹಿತನಿಗೆ ತಾಗಿದ್ದರಿಂದ ಹೆದರಿ ವ್ಯಕ್ತಿಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ವಿದ್ಯಾನಗರದ ಗೋಪಾಲ್ ಗ್ಲಾಸ್ ಹೌಸ್ ಮಾಲೀಕ ಮಂಜುನಾಥ್ ಓಲೇಕರ್ (55) ಮೃತಪಟ್ಟವರು. ಅಗರ್ಭ ಶ್ರೀಮಂತರಾದ ಮಂಜುನಾಥ್ ಓಲೇಕಾರ್ ಅವರು ತಮ್ಮ ಪುತ್ರ ಸಂದೀಪ್ (30) ಹುಟ್ಟುಹಬ್ಬ ಹಾಗೂ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸುವ ಸಲುವಾಗಿ ಮನೆಯಲ್ಲೇ ಪೆಂಡಾಲ್ ಹಾಕಿ ಊಟೋಪಚಾರದ ವ್ಯವಸ್ಥೆಯನ್ನೂ ಮಾಡಿದ್ದರು. ಪಾರ್ಟಿಗಾಗಿ ಸಂದೀಪ್ನ ಸ್ನೇಹಿತರು ಮತ್ತು ಸಂಬಂಧಿಕರು ಆಗಮಿಸಿದ್ದರು. ಮಧ್ಯರಾತ್ರಿ 12 ಗಂಟೆ ವೇಳೆಗೆ ಹೊಸ ವರ್ಷವನ್ನು ಸ್ವಾಗತಿಸುವ ಸಲುವಾಗಿ ಮಂಜುನಾಥ್ ಅವರು ಕೋವಿ ತಂದು ಗನ್ಗೆ ಬುಲ್ ಲೋಡ್ ಮಾಡುವ ವೇಳೆ ಅದು ಒಮ್ಮೆಲೆ ಸಿಡಿದಿದ್ದು, ಸಂದೀಪ್ನ ಸ್ನೇಹಿತ ವಿದ್ಯಾನಗರದ ವಿನಯ್ (30)ನ ಹೊಟ್ಟೆಗೆ ತಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಯುವಕನಿಗೆ ಗುಂಡು ತಾಗಿದ್ದರಿಂದ ಆತಂಕಗೊಂಡ ಮಂಜುನಾಥ್ ಅವರಿಗೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಸಾವನ್ನಪ್ಪಿದರು.
ಮಂಜುನಾಥ್ ಅವರು ಡಬ್ಬಲ್ ಬ್ಯಾರೆಲ್ ಗನ್ ಲೈಸೆನ್ಸ್ ಹೊಂದಿದ್ದರು ಎಂದು ತಿಳಿದು ಬಂದಿದೆ. ಕೋಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.