ಬೆಂಗಳೂರು, ಡಿ 31 (DaijiworldNews/DB): ಬಿಜೆಪಿಯ ಭ್ರಷ್ಟಾಚಾರಕ್ಕೆ ಅಂದು ಸಂತೋಷ್ ಪಾಟೀಲ್, ಇಂದು ಪ್ರಸಾದ್, ಮುಂದಿನ ಬಲಿ ಇನ್ಯಾರೋ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವರಾಯನದುರ್ಗದ ಅತಿಥಿ ಗೃಹದಲ್ಲಿ ಗುತ್ತಿಗೆದಾರ ಟಿ.ಎನ್. ಪ್ರಸಾದ್ ಎಂಬವರು ನೇಣು ಬಿಗಿದುಕೊಂಡು ಶುಕ್ರವಾರ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸರಣಿ ಟ್ವೀಟ್ ಮಾಡಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಗುತ್ತಿಗೆದಾರ ಪ್ರಸಾದ್ ಸಾವಿನ ಬಗ್ಗೆ ಪಾರದರ್ಶಕ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಸಂತೋಷ್ ಪಾಟೀಲ್ ಅವರಿಂದ ಹಿಡಿದು ಇಂದು ದೇವರಾಯನದುರ್ಗದ ಗುತ್ತಿಗೆದಾರ ಪ್ರಸಾದ್ ಅವರ ಸಾವಿನವರೆಗೆ ಬಿಜೆಪಿಯ ಭ್ರಷ್ಟಾಚಾರ ಹೆಮ್ಮರವಾಗಿ ಬೆಳೆದು ನಿಂತಿದೆ. 40 ಪರ್ಸೆಂಟ್ ಕಮೀಷನ್ನ ದುರಾಸೆ ಮತ್ತೊಬ್ಬ ಅಮಾಯಕ ಗುತ್ತಿಗೆದಾರನ ಕುತ್ತಿಗೆಗೆ ಕುಣಿಕೆಯಾಗಿರುವುದು ಬಿಜೆಪಿಯ ನೀಚ ರಾಜಕಾರಣದ ಪರಮಾವಧಿ ಎಂದವರು ವಾಗ್ದಾಳಿ ನಡೆಸಿದ್ದಾರೆ.
40 ಪರ್ಸೆಂಟ್ ಕಮೀಷನ್ ದಾಹಕ್ಕೆ ಗುತ್ತಿಗೆದಾರರ ಸರಣಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ. ರಾಜ್ಯದ ಜನರ ಮುಂದೆ ಬಿಜೆಪಿ ಅಸಲಿಯತ್ತು ಬಯಲಾಗಿದ್ದರೂ ರಾಜ್ಯ ಸರ್ಕಾರ ಇನ್ನೂ ತನ್ನ ಕಮೀಷನ್ ದಂಧೆ ಮುಂದುವರೆಸುತ್ತಿರುವುದು ವಿಪರ್ಯಾಸ. ಬಿಜೆಪಿಯ ಭ್ರಷ್ಟಾಚಾರಕ್ಕೆ ಅಂದು ಸಂತೋಷ್ ಪಾಟೀಲ್, ಇಂದು ಪ್ರಸಾದ್, ಮುಂದಿನ ಬಲಿ ಇನ್ಯಾರೋ ಎಂದಿದ್ದಾರೆ.
ಮುಖ್ಯಮಂತ್ರಿಗಳೇ ರಾಜ್ಯದಲ್ಲಿ ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದೀರೋ ಅಥವಾ ಜನರ ಶವಯಾತ್ರೆ ಮಾಡುತ್ತಿದ್ದೀರೋ? ಪ್ರಸಾದ್ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆಯಾಗಬೇಕು. ಅವರ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು? ಇಲ್ಲವಾದಲ್ಲಿ ನಿಮ್ಮ ಸರ್ಕಾರದ ಅಧಃಪತನ ಖಚಿತ ಎಂದು ಡಿಕೆಶಿ ಹೇಳಿದ್ದಾರೆ.