ಶ್ರೀನಗರ, ಡಿ 31 (DaijiworldNews/DB): ಈ ವರ್ಷದಲ್ಲಿ ಜಮ್ಮು -ಕಾಶ್ಮೀರದಲ್ಲಿ ಒಟ್ಟು 172 ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಎಡಿಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
172 ಮಂದಿ ಭಯೋತ್ಪಾದಕರನ್ನು ಹತ್ಯೆಗೈಯಲಾಗಿದ್ದು, ಈ ಪೈಕಿ 42 ಮಂದಿ ವಿದೇಶಿಯರು ಸೇರಿದ್ದಾರೆ. ಕಾಶ್ಮೀರದಲ್ಲಿ ಒಟ್ಟು 93 ಎನ್ಕೌಂಟರ್ಗಳು ನಡೆದಿವೆ ಎಂದವರು ಮಾಹಿತಿ ನೀಡಿದ್ದಾರೆ.
ಹತ್ಯೆಯಾದ ಭಯೋತ್ಪಾದಕರಲ್ಲಿ ವಿವಿಧ ಸಂಘಟನೆಗಳಿಗೆ ಸೇರಿದವರು ಇದ್ದಾರೆ. 108 ಮಂದಿ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್), ಲಷ್ಕರ್ ಎ ತಯಬಾ (ಎಲ್ಇಟಿ) ಸಂಘಟನೆಗಳಿಗೆ ಸೇರಿದವರಾಗಿದ್ದಾರೆ. ಇನ್ನು 35 ಮಂದಿ ಜೈಶ್-ಎ-ಮೊಹಮ್ಮದ್, 22 ಮಂದಿ ಹಿಜ್ಬ್ ಉಲ್ ಮುಜಾಹಿದೀನ್, ನಾಲ್ವರು ಅಲ್ ಬದ್ರ್ ಮತ್ತು ಮೂವರು ಅನ್ಸರ್ ಘಜ್ವತ್ ಉಲ್ ಹಿಂದ್ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದರು.
ಎನ್ಕೌಂಟರ್ ನಡೆದ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಶಾಂತಿ ಕದಡುವ ಪ್ರಯತ್ನಗಳೂ ಆಗಿಲ್ಲ ಎಂದವರು ಇದೇ ವೇಳೆ ತಿಳಿಸಿದರು.
ಇನ್ನು ಭಯೋತ್ಪಾದಕರ ದಾಳಿಗೆ ಮೂವರು ಕಾಶ್ಮೀರಿ ಪಂಡಿತರು ಸೇರಿ 29 ಮಂದಿ ನಾಗರಿಕರು ಸಾವನ್ನಪ್ಪಿರುವುದು ದುಃಖಕರವಾಗಿದೆ ಎಂದವರು ಇದೇ ವೇಳೆ ಹೇಳಿದರು.