ಬೆಂಗಳೂರು, ಡಿ 31 (DaijiworldNews/DB): ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಗುಜರಾತ್ ಕಾರ್ಪೋರೇಟ್ ಕುಳಗಳ ಕಣ್ಣು ಬಿದ್ದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ಶನಿವಾರ ಹೇಳಿಕೆ ನೀಡಿರುವ ಅವರು, ರಾಜ್ಯಕ್ಕೆ ನಿನ್ನೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಹಾಲು ಮಹಾ ಮಂಡಳ ಗುಜರಾತ್ ಜೊತೆಗೂಡಬೇಕೆಂಬ ಇಂಗಿತ ವ್ಯಕ್ತಪಡಿಸಿರುವುದು, ಚಿನ್ನದ ಮೊಟ್ಟೆ ಇಡುವ ಕೇಳಿ ಮೇಲೆ ಕಣ್ಣು ಹಾಕಿದಂತಾಗಿದೆ. ನಮ್ಮ ಬ್ಯಾಂಕ್ ವಿಲೀನಗೊಳಿಸಿ ಆರ್ಥಿಕತೆ ನಾಶ ಮಾಡಿದ ಬಿಜೆಪಿ ಈಗ ಹಾಲಿನ ಮೂಲಕ್ಕೂ ಸಂಚಕಾರ ಒಡ್ಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ 20000 ಕೋಟಿ ರೂಪಾಯಿಗಳವರೆಗೆ ಹಾಲಿನ ಮೂಲಕ ರೈತರು ವಹಿವಾಟು ನಡೆಸುತ್ತಾರೆ. ಅದೆಷ್ಟೋ ಮನೆಗಳಿಗೆ ಹಾಲು ಆದಾಯದ ಆಧಾರಸ್ಥಂಭವಾಗಿದೆ. ಆದರೆ ಇವರು ಕಣ್ಣು ಬಿದ್ದ ಕಡೆ, ಕಾಲಿಟ್ಟ ಕಡೆ ಎಲ್ಲವೂ ನಾಶವಾಗುತ್ತಿದೆ ಎಂದರು.
ಥರ ಥರದ ಸುಳ್ಳು, ಮುಳ್ಳಿನ ಟೋಪಿ ತಯಾರಿಸಿಕೊಂಡು ಗುಜರಾತ್ ಕಾರ್ಪೋರೇಟ್ ಕಂಪೆನಿಗಳ ಉದ್ದಾರಕ್ಕಾಗಿ ಮೋದಿ, ಅಮಿತ್ ಶಾ ಮುಂತಾದವರು ಕನ್ನಡಿಗರ ತಲೆಗೆ ತೊಡಿಸಲು ಬರುತ್ತಿದ್ದಾರೆ. ದ್ವೇಷ ರಾಜಕಾರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣವೆಂಬ ವಿಷದ ಮುಳ್ಳುಗಳೂ ಅವರಲ್ಲಿದೆ ಎಂದು ಆರೋಪಿಸಿದರು.
ಅಂಬಾನಿ, ಅದಾನಿ ಮುಂತಾದ ಬಂಡವಾಳಿಗರಿಗೆ ದೇಶ ಲೂಟಿ ಮಾಡಲು ಲೈಸೆನ್ಸ್ ನೀಡುವುದೇ ಬಿಜೆಪಿಯವರಿಗೆ ರಾಷ್ಟ್ರಪ್ರೇಮ. ಮನುವಾದಿ ಸಿದ್ದಾಂತ ಜಾರಿಗೊಳಿಸಿ ನಿಜವಾದ ದಾರ್ಶನಿಕರನ್ನು ದೂರ ಇಡುವುದೇ ಅವರಿಗೆ ರಾಷ್ಟ್ರಪ್ರೇಮ. ಬಿಜೆಪಿಯ ವಿದೂಷಕ ಸುಳ್ಳರನ್ನು ರಾಜ್ಯದಿಂದ ತೊಲಗಿಸಿ ಈ ರಾಜ್ಯವನ್ನು ರಕ್ಷಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದವರು ತಿಳಿಸಿದರು.