ಪಾಟ್ನಾ, ಡಿ 31 (DaijiworldNews/DB): ಕಳೆದ ನಾಲ್ಕು ದಶಕಗಳಿಂದ ಸ್ವಚ್ಚತಾ ಕಾರ್ಮಿಕಳಾಗಿ ದುಡಿಯುತ್ತಿದ್ದ ಮಹಿಳೆಯೊಬ್ಬರು ಗಯಾ ಮುನ್ಸಿಪಲ್ನ ಉಪ ಮೇಯರ್ ಗದ್ದುಗೆಯನ್ನು ಅಲಂಕರಿಸಿದ್ದಾರೆ. ಆ ಮೂಲಕ ಗಯಾವು ಹೊಸ ಇತಿಹಾಸವೊಂದಕ್ಕೆ ಸಾಕ್ಷಿಯಾಗಿದೆ.
ಸ್ವಚ್ಚತಾ ಕಾರ್ಮಿಕಳಾಗಿ ದುಡಿಯುತ್ತಿದ್ದ ಚಿಂತಾದೇವಿ ಅವರೇ ಗಯಾದ ಉಪ ಮೇಯರ್ ಆಗಿ ಆಯ್ಕೆಯಾದವರು. ಸ್ವಚ್ಚತೆಯೊಂದಿಗೆ ತರಕಾರಿ ಮಾರಾಟಗಾರರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಇತ್ತೀಚೆಗೆ ಗಯಾ ಮುನ್ಸಿಪಾಲ್ಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಚಿಂತಾದೇವಿಯವರನ್ನು ಉಪ ಮೇಯರ್ ಆಗಿ ಆಯ್ಕೆ ಮಾಡಲಾಗಿದೆ.
ಇನ್ನು ಚಿಂತಾದೇವಿ ಆಯ್ಕೆಗೆ ಸಂತಸ ವ್ಯಕ್ತಪಡಿಸಿರುವ ನೂತನ ಮೇಯರ್ ಗಣೇಶ್ ಪಾಸ್ವಾನ್, ಗಯಾವು ಜ್ಞಾನೋದಯದ ಸ್ಥಳ. ಈ ಹಿಂದೆ 1996ರಲ್ಲಿ ಕಲ್ಲುಪುಡಿ ಮಾಡುವ ಕೆಲಸದಲ್ಲಿ ಮಾಡುತ್ತಿದ್ದ ಮುಸಾಹರ್ ಸಮಯದಾಯದ ಭಗವತಿ ದೇವಿ ಎಂಬ ಮಹಿಳೆ ಜನತಾ ದಳ (ಸಂಯುಕ್ತ)ದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಇದೀಗ ಸ್ವಚ್ಚತಾ ಸಿಬಂದಿಯಾಗಿದ್ದ ಚಿಂತಾದೇವಿ ಅವರು ಉಪ ಮೇಯರ್ ಆಗಿರುವುದು ಗಯಾ ಸಾಧನೆಯ ಹೊಸ ಮೈಲಿಗಲ್ಲಾಗಿದೆ ಎಂದರು.