ನರಸಿಪಟ್ಟಣಂ, ಡಿ 31 (DaijiworldNews/DB): ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ರೋಡ್ ಶೋ ಸಂದರ್ಭ ಕಾಲ್ತುಳಿತ ಸಂಭವಿಸಿ ಎಂಟು ಮಂದಿ ಸಾವನ್ನಪ್ಪಿದ ಘಟನೆ ಸಂಬಂಧಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೋಟೋಶೂಟ್ಗಾಗಿ ಜನರನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ರಾಜಕೀಯ ಲಾಭಕ್ಕಾಗಿ ಅಮಾಯಕರನ್ನು ಬಲಿಯಾಗಿಸಿದ್ದಾರೆ. ನಾಚಿಕೆಗೇಡಿನ ಕೃತ್ಯವಿದು. ಸಣ್ಣ ಸಂಖ್ಯೆಯಲ್ಲಿ ಜನ ಸೇರಿದ್ದರೂ, ಫೋಟೋಶೂಟ್, ಡ್ರೋನ್ಶೂಟ್ಗಾಗಿ ಕಡಿದಾದ ರಸ್ತೆಯಲ್ಲಿ ಜನರನ್ನು ನೂಕಿ ಹಾಕಿದ್ದಾರೆ. ಅಲ್ಲದೆ ತಮ್ಮದೇ ವಾಹನಗಳನ್ನು ಅಡ್ಡ ಇಟ್ಟು ಬ್ಯಾರಿಕೇಡ್ನಂತೆ ಬಿಂಬಿಸಿದ್ದಾರೆ. ಇದರಿಂದ ಎಂಟು ಮಂದಿ ವೃಥಾ ಪ್ರಾಣ ಕಳೆದುಕೊಳ್ಳುವಂತಾಗಿದೆ. ಜನರನ್ನು ಬಾಬು ಅವರು ಕೊಂದಿದ್ದಾರೆ ಎಂದು ಕಿರಿಕಾರಿದರು.
ಟಿಡಿಪಿ ಮುಖ್ಯಸ್ಥರ ಈ ನಡೆ ಹಿಂದಿನಿಂದಲೇ ಇತ್ತು. 2015ರಲ್ಲಿ ಗೋದಾವರಿ ಪುಷ್ಕರಾಲು ಸಂದರ್ಭದಲ್ಲಿ 29 ಮಂದಿಯ ಸಾವಿಗೆ ಕಾರಣರಾಗಿದ್ದರು. ಅವರಿಗೆ ತಮ್ಮನ್ನು ಬಿಂಬಿಸಿಕೊಳ್ಳುವುದಷ್ಟೇ ಮುಖ್ಯ ಹೊರತು ಜನರ ಬಗ್ಗೆ ಕಾಳಜಿಯಿಲ್ಲ. ಜನರಿಗೆ ಬೆನ್ನಿಗೆ ಚೂರಿ ಹಾಕುತ್ತಿರುವ ಅವರು, ಕಾಲ್ತುಳಿತದಿಂದ ಸಾವನ್ನಪ್ಪಿದವರ ಬಗ್ಗೆ ಮರುಗದೆ ಕೆಲವೇ ದಿನಗಳಲ್ಲಿ ಕಾವಳಿಯಲ್ಲಿಯೂ ರೋಡ್ಶೋ ನಡೆಸಿದ್ದಾರೆ ಎಂದು ಆರೋಪಿಸಿದರು.
ನೆಲ್ಲೂರ್ ಜಿಲ್ಲೆಯ ಕಂಡುಕೂರ್ನಲ್ಲಿ ತೆಲುಗು ದೇಶಂ ಪಕ್ಷ ಬುಧವಾರ ಆಯೋಜಿಸಿದ್ದ ರೋಡ್ ಶೋ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದರು.