ನವದೆಹಲಿ, ಡಿ 31 (DaijiworldNews/DB): ಶುಕ್ರವಾರ ಮುಂಜಾನೆ ನಡೆದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡ ಭಾರತ ತಂಡದ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಅವರಿಗೆ ಸಹಾಯ ಮಾಡಿದವರನ್ನು ಗೌರವಿಸಲಾಗುವುದು ಎಂದು ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಹೇಳಿದ್ದಾರೆ.
ಹಮ್ಮದ್ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಪಂತ್ ಚಾಲನೆ ಮಾಡುತ್ತಿದ್ದ ಕಾರು ರಸ್ತೆ ಡಿವೈಡರ್ಗೆ ಢಿಕ್ಕಿ ಹೊಡೆದು ಸುಟ್ಟು ಕರಕಲಾಗಿತ್ತು. ಕಾರಿನಲ್ಲಿದ್ದ ರಿಷಭ್ ಪಂತ್ ಗಂಭೀರ ಗಾಯಗೊಂಡಿದ್ದರು. ಅಪಘಾತದಲ್ಲಿ ಬೆನ್ನು, ತಲೆ, ಹಣೆಗೆ ಗಂಭೀರ ಗಾಯವಾಗಿದ್ದ ರಿಷಭ್ನ ಸಹಾಯಕ್ಕೆ ಕೂಡಲೇ ಧಾವಿಸಿ ಬಂದವರನ್ನು ಗುರುತಿಸಿ ಅವರನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಯೋಜನೆಯಡಿಯಲ್ಲಿ ಗೌರವಿಸಲಾಗುವುದು. ಅಲ್ಲದೆ ಅವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಮೊದಲ ಒಂದು ಗಂಟೆ ನಿರ್ಣಾಯಕ ಅವಧಿ. ಆ ಒಂದು ಗಂಟೆಯೊಳಗೆ ಸರಿಯಾದ ಚಿಕಿತ್ಸೆ ದೊರೆತಲ್ಲಿ ವ್ಯಕ್ತಿಯನ್ನು ಪ್ರಾಣಹಾನಿಯಿಂದ ರಕ್ಷಿಸಬಹುದು. ಜನಸಾಮಾನ್ಯರಲ್ಲಿ ಉತ್ತಮ ನಡವಳಿಕೆ ಪ್ರೋತ್ಸಾಹಿಸಲು ಉತ್ತಮ ಸಮರಿತನ್ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ ಎಂದರು.
ಇನ್ನು ಪಂತ್ಗೆ ಸಹಾಯ ಮಾಡಿದ ಹರಿಯಾಣ ರಸ್ತೆ ಸಾರಿಗೆ ಚಾಲಕನಿಗೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ಧನ್ಯವಾದ ಸಲ್ಲಿಸಿದ್ದಾರೆ. ಸುಟ್ಟು ಕರಕಲಾಗುತ್ತಿದ್ದ ಕಾರಿನಿಂದ ಹೊರಗೆಳೆದು ಬೆಡ್ಶೀಟ್ನಿಂದ ಸುತ್ತಿ ಆಂಬುಲೆನ್ಸ್ಗೆ ಕರೆ ಮಾಡಿದ ಚಾಲಕ ಸುಶೀಲ್ಕುಮಾರ್ ಅವರಿಗೆ ಧನ್ಯವಾದ. ಈ ನಿಸ್ವಾರ್ಥ ಸೇವೆಗೆ ನಾವೆಲ್ಲರೂ ಋಣಿ. ನೀವು ರಿಯಲ್ ಹೀರೋ ಎಂದು ಬರೆದುಕೊಂಡಿದ್ದಾರೆ.