ಪಾಟ್ನಾ, ಡಿ 31 (DaijiworldNews/DB): ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರನ್ನು ಹೊಗಳಿದಕ್ಕೆ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ರಜೀಬ್ ರಾಜನ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.
ಪಕ್ಷದ ಶಿಸ್ತು ಉಲ್ಲಂಘನೆ ಹಾಗೂ ವೈರುಧ್ಯ ಹೇಳಿಕೆ ನೀಡಿದ ಆರೋಪದಲ್ಲಿ ಅವರನ್ನು ಉಚ್ಚಾಟಿಸಲಾಗಿದೆ ಎಂದು ಪಕ್ಷ ತಿಳಿಸಿದೆ. ಬಿಹಾರದಲ್ಲಿ ಮದ್ಯಪಾನ ನಿಷೇಧಿಸಿರುವ ಸಿಎಂ ಕ್ರಮವನ್ನು ರಜೀಬ್ ರಾಜನ್ ಸಮರ್ಥಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆರು ವರ್ಷ ಕಾಲ ರಾಜನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ತಿಳಿಸಿದ್ದಾರೆ. ಆದರೆ ಪಕ್ಷ ತಮ್ಮನ್ನು ಉಚ್ಚಾಟಿಸಿಲ್ಲ, ಉಚ್ಚಾಟನೆ ಆದೇಶ ನನ್ನ ಕೈ ಸೇರುವುದಕ್ಕೂ ಮೊದಲೇ ನಾನು ಪಕ್ಷ ತೊರೆದಿದ್ದೇನೆ ಎಂದು ರಾಜನ್ ಸ್ಪಷ್ಟಪಡಿಸಿದದ್ದಾರೆ.
ಸಂಯುಕ್ತ ಜನತಾದಳ ತೊರೆದು ಬಿಜೆಪಿ ಸೇರಿದ್ದ ರಾಜನ್, ಕಳೆದ ಏಳು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು. ಇದೀಗ ಪಕ್ಷದಿಂದ ಅವರು ಹೊರ ಹೋಗಿದ್ದು, ಸಂಯುಕ್ತ ಜನತಾದಳಕ್ಕೆ ವಾಪಸ್ಸಾಗಲಿದ್ದಾರೆ ಎನ್ನಲಾಗಿದೆ.