ಭೋಪಾಲ್, ಡಿ 30 (DaijiworldNews/DB): ಶ್ರೀರಾಮ, ಹನುಮನ ಮೇಲಿನ ಭಕ್ತಿ ಬಿಜೆಪಿಯ ಹಕ್ಕುಸ್ವಾಮ್ಯಕ್ಕೊಳಪಟ್ಟಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಗುಡುಗಿದ್ದಾರೆ.
ಛಿಂದ್ವಾರಾದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ವೇಳೆ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ತಮ್ಮ ತವರು ರಾಜ್ಯದಲ್ಲಿ ಹನುಮಾನ್ ದೇವಳ ನಿರ್ಮಿಸುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಶ್ರೀರಾಮ, ಹನುಮಂತನ ಮೇಲೆ ಎಲ್ಲರಿಗೂ ಭಕ್ತಿಯಿದೆ. ಬಿಜೆಪಿಯ ಹಕ್ಕುಸ್ವಾಮ್ಯಕ್ಕೆ ಆ ಭಕ್ತಿ ಒಳಪಟ್ಟಿಲ್ಲ ಎಂದರು.
ಇನ್ನು ಹಿಂದುಗಳು ಮನೆಗಳಲ್ಲಿ ಶಸ್ತ್ರ ಇರಿಸಿಕೊಳ್ಳುವಂತೆ ಕರೆ ನೀಡಿದ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಉಮಾ ಭಾರತಿ, ವನವಾಸದ ವೇಳೆಯೂ ಶಸ್ತ್ರತ್ಯಾಗ ಮಾಡುವುದಿಲ್ಲವೆಂಬ ಪ್ರತಿಜ್ಞೆ ಮಾಡಿದ ಶ್ರೀರಾಮನ ನಿದರ್ಶನ ನಮ್ಮ ಮುಂದಿದೆ. ಶಸ್ತ್ರ ಹೊಂದುವುದರಲ್ಲಿ ತಪ್ಪಿಲ್ಲ. ಆದರೆ ಹಿಂಸೆ ಬಗ್ಗೆ ತಳೆಯುವ ಚಿಂತನೆಗಳು ಖಂಡಿತಾ ಸಮರ್ಥನೀಯವಲ್ಲ ಎಂದು ಪ್ರತಿಪಾದಿಸಿದರು.
ಪಠಾಣ್ ಸಿನಿಮಾದಲ್ಲಿನ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವ ದೃಶ್ಯಗಳನ್ನು ಸಿನಿಮಾದಲ್ಲಿ ತೋರಿಸುವುದು ಸರಿಯಲ್ಲ. ಅಂತಹ ದೃಶ್ಯಗಳನ್ನು ಸೆನ್ಸಾರ್ ಮಂಡಳಿ ತೆಗೆದು ಹಾಕಬೇಕು. ಭಾರತೀಯ ಸಂಸ್ಕೃತಿಯ ಅಸ್ಮಿತೆಯಾಗಿರುವ ಕೇಸರಿಗೆ ಅಥವಾ ಯಾವುದೇ ಬಣ್ಣಗಳಿಗಾಗಲೀ ಅವಮಾನ ಸಲ್ಲ.