ನವದೆಹಲಿ, ಡಿ 30 (DaijiworldNews/DB): ರಾಹುಲ್ ಗಾಂಧಿಯವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕಾಂಗ್ರೆಸ್ ಆಹ್ವಾನಿಸಿದೆ.
ಉತ್ತರ ಪ್ರದೇಶದ ಮಾಜಿ ಎಂಎಲ್ಸಿ, ಕಾಂಗ್ರೆಸ್ ನಾಯಕ ದೀಪಕ್ ಸಿಂಗ್ ಅವರು ಅಮೇಥಿ ಬಿಜೆಪಿ ಸಂಸದೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಗುರುವಾರ ಪತ್ರ ಬರೆದಿದ್ದು, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಗೌರಿಗಂಜ್ನಲ್ಲಿರುವ ಕ್ಯಾಂಪ್ ಕಚೇರಿಯಲ್ಲಿ ಇರಾನಿ ಅವರ ಕಾರ್ಯದರ್ಶಿ ನರೇಶ್ ಶರ್ಮಾ ಅವರಿಗೆ ಆಹ್ವಾನ ಪತ್ರವನ್ನು ಹಸ್ತಾಂತರಿಸಲಾಗಿದೆ.
ಯಾತ್ರೆಗೆ ಎಲ್ಲರನ್ನೂ ಆಹ್ವಾನಿಸಬೇಕೆಂದು ಪಕ್ಷದ ಹಿರಿಯ ನಾಯಕರ ನಿರ್ದೇಶನದ ಮೇರೆಗೆ ಸ್ಮೃತಿ ಇರಾನಿ ಅವರಿಗೂ ಆಹ್ವಾನ ನೀಡಿದ್ದೇನೆ ಎಂದು ಸಿಂಗ್ ತಿಳಿಸಿದ್ದಾರೆ.
ಇನ್ನು ಕಾಂಗ್ರೆಸ್ ಸ್ಮೃತಿ ಇರಾನಿಯವರನ್ನು ಭಾರತ್ ಜೋಡೋ ಯಾತ್ರೆಗೆ ಆಹ್ವಾನಿಸಿರುವುದರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ದುರ್ಗೇಶ್ ತ್ರಿಪಾಠಿ, ಸ್ಮೃತಿ ಇರಾನಿಯವರಾಗಲೀ, ಪಕ್ಷದ ಇತರ ನಾಯಕರು, ಕಾರ್ಯಕರ್ತರಾಗಲೀ ಯಾತ್ರೆಯಲ್ಲಿ ಪಾಲ್ಗೊಳ್ಳುವ ಪ್ರಶ್ನೆಯೇ ಇಲ್ಲ. ಭಾರತ ಎಂದಿಗೂ ಒಡೆದಿಲ್ಲ ಎಂದಾದ ಮೇಲೆ ಒಗ್ಗೂಡಿಸುವ ಮಾತೆಲ್ಲಿಂದ ಬಂತು? ಅಖಂಡ ಭಾರತ ಪರಿಕಲ್ಪನೆಯಡಿಯಲ್ಲಿಯೇ ಬಿಜೆಪಿ ಕೆಲಸ ಮಾಡುತ್ತದೆ ಎಂದರು.