ಮಂಡ್ಯ, ಡಿ 30 (DaijiworldNews/DB): ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸವು ರಾಜ್ಯ ಬಿಜೆಪಿಯಲ್ಲಿ ಹೆಚ್ಚಿನ ಉತ್ಸಾಹ ಮತ್ತು ಸಂಚಲನಕ್ಕೆ ಕಾರಣವಾಗಿದೆ. ಚಾಣಕ್ಯ ರಾಜ್ಯದಲ್ಲಿ ಸಾಲು ಸಾಲು ಸಭೆಗಳನ್ನು ನಡೆಸಲಿದ್ದು, ಬಿಜೆಪಿ ರಾಜ್ಯ ಘಟಕ ಚುರುಕಿನ ಚಟುವಟಿಕೆಯಲ್ಲಿ ತೊಡಗಿದೆ.
ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಘಟನಾ ಕಾರ್ಯದರ್ಶಿ ರಾಜೇಶ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೊಂದಿಗೆ ಅಮಿತ್ ಶಾ ಕೆಲ ಕಾಲ ಸಮಾಲೋಚನೆ ನಡೆಸಿದ್ದು, ಮಂಡ್ಯದಲ್ಲಿ ಇಂದು ನಡೆಯುವ ಜನ ಸಮಾವೇಶದಲ್ಲಿಯೂ ಪಾಲ್ಗೊಳ್ಳಲಿದ್ದು, ಈ ಸಮಾವೇಶಕ್ಕೆ 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ನ ಮತ ಬ್ಯಾಂಕ್ನ್ನು ತನ್ನೆಡೆಗೆ ಸೆಳೆದುಕೊಳ್ಳಲು ಮತ್ತು ಇಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲೂ ಅಮಿತ್ ಶಾ ಪ್ರಯತ್ನದಲ್ಲಿ ತೊಡಗಿದ್ದಾರೆ.
ಇನ್ನು ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹೆಚ್ಚಿನ ಸೀಟ್ ಗಳಿಸಿರುವುದರಿಂದ ಇಲ್ಲಿ ಜೆಡಿಎಸ್ ವಿರೋಧಿ ಮತಗಳು ಕಾಂಗ್ರೆಸ್ಗೆ ಹೋಗದೆ ಬಿಜೆಪಿ ಪಾಲಾಗಲು ಕಾರ್ಯತಂತ್ರ ಹೆಣೆಯಲಾಗುತ್ತಿದೆ. ಆ ಮೂಲಕ ಬಿಜೆಪಿಯ ಸಾಂಪ್ರದಾಯಿಕ ಮತಗಳೊಂದಿಗೆ ಜೆಡಿಎಸ್ ವಿರೋಧಿ ಮತಗಳನ್ನು ಸೇರಿಸಿಕೊಂಡು ಗೆಲುವು ಸಾಧಿಸುವ ಯೋಜನೆ ಬಿಜೆಪಿಯದ್ದು.
ಅಭಿವೃದ್ದಿಯೊಂದಿಗೆ ಹಿಂದುತ್ವದ ತಂತ್ರಗಳನ್ನು ಬೆರೆಸಿ ಹಳೇ ಮೈಸೂರು ಭಾಗದ ಜನರನ್ನು ಸೆಳೆದುಕೊಳ್ಳುವುದೂ ಬಿಜೆಪಿಯ ತಂತ್ರವಾಗಿದೆ. ಆದರೆ ಸಿದ್ದಾಂತದಿಂದ ಮಂಡ್ಯ, ಹಳೆ ಮೈಸೂರು ಭಾಗದ ಮತ ಸೆಳೆಯುವುದು ಅಸಾಧ್ಯ ಎಂಬ ನಿಟ್ಟಿನಲ್ಲಿ ಅಭಿವೃದ್ದಿ ಯೋಜನೆಗಳ ಅಸ್ತ್ರವನ್ನೂ ಬಳಸಲು ಯೋಜಿಸುತ್ತಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳನ್ನೇ ಗುರಿಯಾಗಿಸಿಕೊಂಡು ಅಮಿತ್ ಶಾ ಯೋಜನೆ ಸಿದ್ದಪಡಿಸುತ್ತಿದ್ದಾರೆಂದೂ ಹೇಳಲಾಗುತ್ತಿದೆ. ಇಲ್ಲಿನ ಎಲ್ಲಾ ಸ್ಥಿತಿಗತಿಗಳನ್ನು ಅವಲೋಕಿಸಿ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅಮಿತ್ ಶಾ ಯೋಚನೆ.
ಯಡಿಯೂರಪ್ಪ ಗೈರು
ಇನ್ನು ಅಮಿತ್ ಶಾ ಅವರ ಬೆಂಗಳೂರು ಹಾಗೂ ಮಂಡ್ಯದ ಕಾರ್ಯಕ್ರಮಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೈರಾಗುತ್ತಿರುವುದು ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. ಆದರೆ ಪೂರ್ವ ನಿಗದಿತ ಪ್ರವಾಸಗಳ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಅಮಿತ್ ಶಾ ಅವರಿಗೆ ಈಗಾಗಲೇ ಬಿಎಸ್ವೈ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಬದಲು ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.