ಮಂಡ್ಯ, ಡಿ 30 (DaijiworldNews/DB): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಸಕ್ಕರೆ ನಾಡು ಮಂಡ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವರಿಗೆ ಸ್ವಾಗತ ಕೋರಿ ನಗರದ ಅಲ್ಲಲ್ಲಿ ಫ್ಲೆಕ್ಸ್ಗಳನ್ನು ಹಾಕಲಾಗಿದೆ. ವಿಶೇಷವೆಂದರೆ, ಫ್ಲೆಕ್ಸ್ನಲ್ಲಿ ಮಂಡ್ಯದ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಶ್ ಅವರ ಫೋಟೋವೂ ಇದೆ!
ಹೌದು. ಸುಮಲತಾ ಆಪ್ತ, ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದ ಇಂಡವಾಳು ಸಚ್ಚಿದಾನಂದ ಅವರು ಅಮಿತ್ ಶಾ ಅವರಿಗೆ ಸ್ವಾಗತ ಕೋರಿ ಹಾಕಲಾಗಿರುವ ಫ್ಲೆಕ್ಸ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಾದಿಯಾಗಿ ಬಿಜೆಪಿಯ ಪ್ರಮುಖ ನಾಯಕರ ಫೋಟೋಗಳಿದ್ದು, ಜೊತೆಗೆ ಸಂಸದೆ ಸುಮಲತಾ ಅಂಬರೀಶ್ ಅವರ ಫೋಟೋವೂ ರಾರಾಜಿಸಿದೆ. ಸುಮಲತಾರ ಫೋಟೋ ಫ್ಲೆಕ್ಸ್ನಲ್ಲಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಸಂಸದೆಯಾದ ಸುಮಲತಾ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆಂಬ ಸುದ್ದಿ ಕಳೆದೊಂದು ವರ್ಷದಿಂದ ಹರಿದಾಡುತ್ತಲೇ ಇದೆ. ಅಲ್ಲದೆ ಇತ್ತೀಚೆಗಷ್ಟೇ ಸುಮಲತಾ ಆಪ್ತ ಇಂಡವಾಳು ಸಚ್ಚಿದಾನಂದ ಅವರು ಬಿಜೆಪಿ ಸೇರ್ಪಡೆಯಾಗಿದ್ದಲ್ಲದೆ, ಸುಮಲತಾ ಅನುಮತಿ ಪಡೆದೇ ಬಿಜೆಪಿಗೆ ಹೋಗುತ್ತಿದ್ದೇನೆ ಎಂದೂ ಹೇಳಿಕೆ ನೀಡಿದ್ದು, ಸುಮಲತಾ ಬಿಜೆಪಿ ಸೇರ್ಪಡೆಯಾಗುತ್ತಾರೆಂಬ ಸುದ್ದಿಗೆ ಹೆಚ್ಚು ಪುಷ್ಠಿ ನೀಡಿತ್ತು. ಈ ನಡುವೆ ಸುಮಲತಾರೊಂದಿಗೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆಂದೂ ಹೇಳಲಾಗಿತ್ತಾದರೂ, ಇದನ್ನು ಸುಮಲತಾ ಅಲ್ಲಗಳೆದಿದ್ದರು. ಇದೀಗ ಶಾಗೆ ಸ್ವಾಗತ ಕೋರುವ ಫ್ಲೆಕ್ಸ್ನಲ್ಲಿ ಸುಮಲತಾ ಫೋಟೋ ಇರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.