ಭೋಪಾಲ್, ಡಿ 29 (DaijiworldNews/DB): ಗಿಳಿ ಪದವನ್ನು ಸರಿಯಾಗಿ ಬರೆಯದಕ್ಕೆ ಕೋಪಗೊಂಡ ಟ್ಯೂಶನ್ ಶಿಕ್ಷಕರೊಬ್ಬರು ಐದು ವರ್ಷದ ಬಾಲಕಿಯ ಕೈ ತಿರುವುದಿದ್ದು, ಬಾಲಕಿಯ ಕೈ ಮೂಳೆ ಮುರಿದ ಘಟನೆ ನಡೆದಿದೆ.
ಘಟನೆ ಸಂಬಂಧ ಶಿಕ್ಷಕ ಪ್ರಯಾಗ್ ವಿಶ್ವಕರ್ಮ (22)ನನ್ನು ಬಂಧಿಸಲಾಗಿದೆ. ಶಿಕ್ಷಕ ಬಾಲಕಿಯೊಂದಿಗೆ ಗಿಳಿ ಎಂಬುದಾಗಿ ಬರೆಯಲು ಹೇಳಿದ್ದಾನೆ. ಆದರೆ ಈ ಪದವನ್ನು ಬರೆಯಲು ಬಾಲಕಿಗೆ ಸಾಧ್ಯವಾಗಿಲ್ಲ. ಇದರಿಂದ ಕುಪಿತಗೊಂಡ ಶಿಕ್ಷಕ ಆಕೆಯ ಕಪಾಳಕ್ಕೆ ಹೊಡೆದು ಬಳಿಕ ಕೈಯನ್ನು ತಿರುವಿದ್ದಾನೆ. ಕೈ ತಿರುವಿದ ರಭಸಕ್ಕೆ ಬಾಲಕಿಯ ಕೈ ಮೂಳೆ ಮುರಿದು ಹೋಗಿದೆ ಎಂದು ಹಬೀಬ್ಗಂಜ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮನೀಶ್ ರಾಜ್ ಸಿಂಗ್ ಭದೌರಿಯಾ ತಿಳಿಸಿದ್ದಾರೆ.
ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಬಾಲಕಿಯ ಮನೆಯವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.