ಮುಂಬೈ, ಡಿ 29 (DaijiworldNews/HR): 'ಮುಂಬೈ ಯಾರ ಅಪ್ಪನ ಸ್ವತ್ತೂ ಅಲ್ಲ; ಅದು ಮಹಾರಾಷ್ಟ್ರಕ್ಕೆ ಸೇರಿದ್ದು' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವುದು ಸೂಕ್ತ ಎಂದು ಕರ್ನಾಟಕದ ಕೆಲ ರಾಜಕಾರಣಿಗಳು ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿಂದೆ, 'ಗಡಿ ಬಿಕ್ಕಟ್ಟು ಸುಮಾರು 66 ವರ್ಷಗಳಷ್ಟು ಹಳೆಯದಾಗಿದ್ದು, ಶಿವಸೇನಾ ವರಿಷ್ಠರಾಗಿದ್ದ ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರ ಜೊತೆ ಕೆಲಸ ಮಾಡಿದ್ದೇನೆ. ಬಾಳಾಸಾಹೇಬ್ ಅವರ ಸೂಚನೆ ಮೇರೆಗೆ ನಾವು ಬೆಳಗಾವಿಗೆ ಹೋಗಿ ಪ್ರತಿಭಟನೆ ನಡೆಸಿದ್ದವು. ಆಗ ನಮ್ಮನ್ನು ಬಂಧಿಸಿ ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿತ್ತು. ಪೊಲೀಸ್ ಪ್ರಕರಣಗಳಿಗೆಲ್ಲಾ ನಾವು ಹೆದರುವುದಿಲ್ಲ ಎಂದರು.
ಇನ್ನು ಮರಾಠಿ ಭಾಷಿಕರನ್ನು ಹೊಂದಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಮತ್ತು ಭಾಲ್ಕಿಯ 865 ಹಳ್ಳಿಗಳು ತನಗೆ ಸೇರಿದ್ದೆಂದು ಸರ್ಕಾರ ಪ್ರತಿಪಾದಿಸಿದ್ದು, ಈ ನಿಲುವಿಗೆ ಬದ್ಧವಾಗಿರಲಿದೆ ಎಂದು ಪುನರುಚ್ಚರಿಸಿದ್ದಾರೆ.