ಬೆಳಗಾವಿ, ಡಿ 28 (DaijiworldNews/SM): ಬಿಜೆಪಿ ಸರಕಾರ ಕೃಷಿಗೆ ಒತ್ತು ನೀಡಿದೆ ಎನ್ನುವುದು ಸಂಪೂರ್ಣ ಸುಳ್ಳು. ರೈತರಿಗಾಗಿ ಜಾರಿಗೆ ತಂದಿದ್ದ ಕೃಷಿ ಭಾಗ್ಯ ಯೋಜನೆ, ಅರಿವು ಯೋಜನೆಗಳನ್ನು ಬಿಜೆಪಿ ನಿಲ್ಲಿಸಿ ರೈತರಿಗೆ ದ್ರೋಹಬಗೆದಿದೆ. ಈ ವೇಳೆ ರೈತರ ಮಕ್ಕಳಿಗೆ 600 ಕೋಟಿ ರೂ.ಅನುದಾನದಲ್ಲಿ ವಿದ್ಯಾರ್ಥಿವೇತನ ನೀಡಿ ಕೃಷಿಗೆ ಒತ್ತು ನೀಡಿದ್ದೇವೆ ಎನ್ನುವುದು ಸಂಪೂರ್ಣ ಡೋಂಗಿತನ ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕೃಷಿ ಕ್ಷೇತ್ರಕ್ಕೆ ಎದುರಾಗಿರುವ ಸಂಕಷ್ಟದ ಬಗ್ಗೆ ಅವರು ಮಾತನಾಡಿದರು. ನಮ್ಮ ಸರಕಾರದ ಕೊನೆಯ ಬಜೆಟ್ ಗಾತ್ರ 2.02 ಲಕ್ಷ ಕೋಟಿ. ಕಾಂಗ್ರೆಸ್ ಸರಕಾರ ಕೃಷಿಗಾಗಿ ಶೇ.4.7ರಷ್ಟು ಹಣವನ್ನು ಮೀಸಲಿಟ್ಟಿತ್ತು. ಈಗಿನ ಬಜೆಟ್ ಗಾತ್ರ 2,65,720 ಕೋಟಿ ರೂ., ಇದರಲ್ಲಿ ಕೃಷಿಗೆ ಇಟ್ಟಿರುವ ಅನುದಾನ ಶೇ.4.2 ಮಾತ್ರವಾಗಿದೆ. 2001ರಲ್ಲಿ ಹಿಡುವಳಿದಾರರ ಸಂಖ್ಯೆ 62 ಲಕ್ಷ ಕುಟುಂಬಗಳಿದ್ದವು. 2016ರಲ್ಲಿ ಅದು 87 ಲಕ್ಷ ಕುಟುಂಬಗಳಾಗಿವೆ. ಹಿಡುವಳಿಯ ಗಾತ್ರ ಕಡಿಮೆಯಾದಂತೆ ಅದರಿಂದ ಬರುವ ಆದಾಯದ ಪ್ರಮಾಣವೂ ಕಡಿಮೆಯಾಗುತ್ತಾ ಹೋಗುತ್ತಿದೆ ಎಂದು ಅವರು ಹೇಳಿದರು.
ರಾಜ್ಯದ ಜಿಎಸ್ಡಿಪಿಗೆ ಪ್ರತಿ ವರ್ಷ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ ಮತ್ತು ರೇಷ್ಮೆ ಎಲ್ಲವೂ ಸೇರಿ ಎರಡೂವರೆ ಲಕ್ಷ ಕೋಟಿ ರೂ .ಕೊಡುಗೆ ನೀಡುತ್ತಿವೆ. ಪ್ರತಿ ವರ್ಷ ಗೊಬ್ಬರ, ಬೀಜ, ಕೀಟನಾಶಕಗಳಿಗೆ ರಾಜ್ಯದ ರೈತರು ಖರ್ಚು ಮಾಡುವ ಹಣ 20 ಸಾವಿರ ಕೋಟಿ ರೂ. ಎಂದು ಅವರು ತಿಳಿಸಿದರು.
ಚರ್ಮಗಂಟು ರೋಗದಿಂದ 21,305 ಜಾನುವಾರು ಬಲಿಯಾಗಿವೆ. ಈ ರಾಸುಗಳಿಗೆ ಈಗಿಂದೀಗಲೇ ಪರಿಹಾರ ಬಿಡುಗಡೆ ಮಾಡಬೇಕು. ಸುಮಾರು 15 ಲಕ್ಷ ಹೆಕ್ಟೇರ್ ಗಳಲ್ಲಿ ಕಬ್ಬು ಬೆಳೆಯನ್ನು ಬೆಳೆಯುತ್ತಾರೆ. ಸುಮಾರು 25 ಲಕ್ಷ ರೈತ ಕುಟುಂಬಗಳು ಇದರ ಮೇಲೆ ಅವಲಂಬಿತರಾಗಿದ್ದಾರೆ. ರಾಜ್ಯದಲ್ಲಿ 6.5 ಕೋಟಿ ಟನ್ ಕಬ್ಬು ಉತ್ಪಾದನೆಯಾಗುತ್ತದೆ ಎಂದು ಅವರು ತಿಳಿಸಿದರು.