ನವದೆಹಲಿ, ಡಿ 28 (DaijiworldNews/DB): ಭಾರತದ ಮೂಲಭೂತ ಅಂಶಗಳ ಮೇಲೆ ದಾಳಿ ನಿರಂತರವಾಗಿ ನಡೆಯುತ್ತಿದೆ. ದ್ವೇಷದ ಮೂಲಕ ಸಮಾಜವನ್ನು ವಿಭಜಿಸುವ ಕೆಲಸ ಇಲ್ಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಕಾಂಗ್ರೆಸ್ನ 138ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಲೆ ಏರಿಕೆ, ನಿರುದ್ಯೋಗ ತಾಂಡವವಾಡುತ್ತಿದೆ. ಆದರೆ ಸರ್ಕಾರ ಈ ಬಗ್ಗೆ ಚಿಂತೆಯೇ ಮಾಡುತ್ತಿಲ್ಲ. ದೇಶದ ಮೂಲಭೂತ ಅಂಶಗಳ ಮೇಲೆ ದಾಳಿ ಮಾಡುವುದರಲ್ಲೇ ಆ ಪಕ್ಷ ತೊಡಗಿಸಿಕೊಂಡಿದೆ ಎಂದರು.
ಒಗ್ಗಟ್ಟಿನ ಸಮಾಜವನ್ನು ದ್ವೇಷದಿಂದ ವಿಭಜನೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಜನರನ್ನು ಜೊತೆಗೇ ಕರೆದೊಯ್ಯುವ ಕೆಲಸ ಮಾಡುತ್ತಿದೆ. ಭಾರತ ಪ್ರಗತಿ ಸಾಧಿಸಲು ಕಾಂಗ್ರೆಸ್ನಲ್ಲಿರುವ ಈ ಅಂಶವೇ ಕಾರಣ ಎಂದವರು ಪ್ರತಿಪಾದಿಸಿದರು.