ನವದೆಹಲಿ, ಡಿ 28 (DaijiworldNews/DB): ಮಧುರೈ ವಿಮಾನ ನಿಲ್ದಾಣದ ಭದ್ರತಾ ಸಿಬಂದಿ ನನ್ನ ಹೆತ್ತವರಿಗೆ ಕಿರುಕುಳ ನೀಡಿದ್ದಾರೆ ಎಂದು ತಮಿಳು ನಟ ಸಿದ್ದಾರ್ಥ್ ಆರೋಪಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಅವರು, ನನ್ನ ಹೆತ್ತವರ ಕೈಯಲ್ಲಿದ ಚೀಲದಿಂದ ನಾಣ್ಯಗಳನ್ನು ಹೊರ ತೆಗೆಯಲು ಭದ್ರತಾ ಸಿಬಂದಿ ಒತ್ತಾಯಿಸಿದ್ದಾರೆ. ಇಂಗ್ಲಿಷ್ನಲ್ಲಿ ಮಾತನಾಡುವಂತೆ ಪೋಷಕರು ಭದ್ರತಾ ಸಿಬಂದಿಯಲ್ಲಿ ಮನವಿ ಮಾಡಿದ್ದಾರೆ. ಆದರೆ ಅವರು ಮಾತ್ರ ಹಿಂದಿಯಲ್ಲೇ ಮಾತನಾಡಿದ್ದಾರೆ. ಈ ವಿಮಾನ ನಿಲ್ದಾಣದಲ್ಲಿ ನನ್ನ ಹೆತ್ತವರು ಭದ್ರತಾ ಸಿಬಂದಿಯಿಂದ ಕಿರುಕುಳ ಅನುಭವಿಸಿದ್ದಾರೆ ಎಂದಿದ್ದಾರೆ.
ಇನ್ನು ಭದ್ರತಾ ಸಿಬಂದಿಯ ನಡವಳಿಕೆಯಿಂದ ಬೇಸತ್ತು ಹೆತ್ತವರು ಪ್ರತಿಭಟಿಸಿದ ವೇಳೆ ಭಾರತದಲ್ಲಿ ಹೀಗೆಯೇ ಇರುತ್ತದೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ಸುಮಾರು 20 ನಿಮಿಷ ಕಾಲ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಅನಗತ್ಯವಾಗಿ ಕಿರುಕುಳ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಸಿದ್ದಾರ್ಥ್ ಎರಡು ದಶಕಗಳಿಂದ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.