ಮೈಸೂರು, ಡಿ 28 (DaijiworldNews/DB): ಕಾರಿನಲ್ಲಿ ಸಂಚರಿಸುವಾಗ ನಾವೆಲ್ಲರೂ ಸೀಟ್ ಬೆಲ್ಟ್ ಧರಿಸಿದ್ದೆವು. ಅದರಿಂದಲೇ ಜೀವ ಉಳಿದಿದೆ. ಪ್ರತಿಯೊಬ್ಬರೂ ಕಾರು ಪ್ರಯಾಣದ ವೇಳೆ ಸೀಟ್ ಬೆಲ್ಟ್ ಧರಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಹೇಳಿದ್ದಾರೆ.
ಮೈಸೂರಿನ ಕಡಕೋಳ ಬಳಿ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ಸೀಟ್ಬೆಲ್ಟ್ ಧರಿಸಿದ್ದರಿಂದಾಗಿಯೇ ದೊಡ್ಡ ಅನಾಹುತದಿಂದ ಪಾರಾದೆವು ಎಂದರು.
ಕಾರಿನ ಬಲ ಭಾಗಕ್ಕೆ ಸಂಪೂರ್ಣ ಹಾನಿಯಾಗಿದೆ. ನಾವು ಸೀಟ್ ಬೆಲ್ಟ್ ಧರಿಸಿದ್ದೆವು. ಹೀಗಾಗಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದೇವೆ. ಪ್ರತಿಯೊಬ್ಬರೂ ಕಾರಿನಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ. ಇದರಿಂದ ಅಪಘಾತದಂತಹ ಸಂದರ್ಭ ಎದುರಾದಾಗ ಆಗುವ ದೊಡ್ಡ ಮಟ್ಟದ ಹಾನಿಯನ್ನು ತಪ್ಪಿಸಬಹುದು ಎಂದವರು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ ನಮ್ಮೆಲ್ಲರ ಆರೋಗ್ಯ ವಿಚಾರಿಸಿದ್ದಾರೆ. ನಾವೆಲ್ಲರೂ ಕ್ಷೇಮವಾಗಿದ್ದೇವೆ ಎಂದು ಅವರಿಗೆ ಹೇಳಿದ್ದೇನೆ ಎಂದರು.
ಪ್ರಹ್ಲಾದ್ ಮೋದಿ ಮತ್ತು ಕುಟುಂಬ ಬೆನ್ಜ್ ಕಾರಿನಲ್ಲಿ ಬಂಡೀಪುರ ಕಡೆಗೆ ಮಂಗಳವಾರ ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಪ್ರಹ್ಲಾದ್ ಮೋದಿ, ಅವರ ಮಗ, ಸೊಸೆ ಹಾಗೂ ಮೊಮ್ಮಗ ಮತ್ತು ಕಾರು ಚಾಲಕನಿಗೆ ಅಪಘಾತದಲ್ಲಿ ಗಾಯವಾಗಿದ್ದರಿಂದ ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.