ನವದೆಹಲಿ, ಡಿ 28 (DaijiworldNews/DB): ಮೂಕ ಗೊಂಬೆ ಎಂದು ಕರೆಸಿಕೊಳ್ಳುತ್ತಿದ್ದ ನನ್ನ ಅಜ್ಜಿ ಇಂದಿರಾಗಾಂಧಿ ಮುಂದೆ ಐರನ್ ಲೇಡಿ ಆಗಿ ಬದಲಾಗಿದ್ದರು ಎಂಬುದನ್ನು ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ತನ್ನನ್ನು ಪಪ್ಪು ಎಂದು ಟೀಕಿಸುವವರಿಗೆ ತಿರುಗೇಟು ನೀಡಿರುವ ಅವರು, ಇದು ನನ್ನ ವಿರುದ್ದ ನಡೆಸಲಾಗುತ್ತಿರುವ ಅಪಪ್ರಚಾರದ ಭಾಗ. ನನಗೆ ಇದರಿಂದ ಏನೂ ಬೇಸರವಿಲ್ಲ. ಆದರೆ ನನ್ನ ಅಜ್ಜಿ ಇಂದಿರಾಗಾಂಧಿಯವರನ್ನು ವಿರೋಧಿಗಳು ಮೂಕ ಗೊಂಬೆ ಎಂದು ಕರೆಯುತ್ತಿದ್ದರು. ಆದರೆ ಮುಂದೆ ಅವರು ಐರನ್ ಲೇಡಿಯಾಗಿ ಬದಲಾಗಿರುವುದನ್ನು ಅವರೆಲ್ಲಾ ನೆನಪಿಟ್ಟುಕೊಳ್ಳಲಿ ಎಂದರು.
ಯಾವುದೇ ಹೆಸರುಗಳಿಂದ ನನ್ನನ್ನು ಕರೆದರೂ ನನಗೆ ಬೇಸರವಿಲ್ಲ. ಅವರಲ್ಲಿರುವ ಭಯದಿಂದಲೇ ಅವರು ನನ್ನನ್ನು ಪಪ್ಪು ಎನ್ನುತ್ತಾರೆ.ವಿರೋಧಿಗಳು ನನ್ನ ಹೆಸರನ್ನು ಹೆಚ್ಚು ಬಳಸಿದಷ್ಟು ನನಗೆ ಖುಷಿಯಾಗುತ್ತದೆ. ಅವರ ಹೃದಯದಲ್ಲಿ ನನ್ನ ಹೆಸರು ಸದಾ ಇರಲಿ ಎಂದವರು ಟಾಂಗ್ ನೀಡಿದರು.