ಬೆಳಗಾವಿ, ಡಿ 28 (DaijiworldNews/HR): ಸಂವಿಧಾನವನ್ನು ಒಪ್ಪದವರು, ಗೋಡ್ಸೆಯನ್ನು ಆರಾಧಿಸುವವರು ದೇಶದ್ರೋಹಿಗಳು ಎಂದು ವಿಧಾನಸಭೆಯ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ನಿಯಮ 69ರಡಿ ಭಯೋತ್ಪಾದನೆ ಕುರಿತು ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಸ್ತಾಪಿಸಿದ ವಿಷಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕರನ್ನು ಯಾವುದೇ ಧರ್ಮದ ಆಧಾರದಲ್ಲಿ ಕಾಣಬಾರದು. ಭಯೋತ್ಪಾದಕ ಕೃತ್ಯ ನಮ್ಮವರು ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಪ್ಪು ಎಂಬ ಮನಸ್ಥಿಯೇ ಆತಂಕಕಾರಿ. ಕಂದಹಾರ್ಗೆ ಮೂವರು ಭಯೋತ್ಪಾದಕರನ್ನು ವಿಮಾನದಲ್ಲಿ ಕೇಂದ್ರ ಸಚಿವರೊಬ್ಬರು ಹೋಗಿ ಬಿಟ್ಟು ಬಂದಿದ್ದು ನಮ್ಮ ಕಣ್ಣ ಮುಂದಿದೆ. ನಂತರ ಅವರಿಂದಾಗಿಯೇ ಸಂಸತ್ನ ಮೇಲೆ ದಾಳಿ, ಮುಂಬಯಿ ಮೇಲಿನ ದಾಳಿ, ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲಿನ ದಾಳಿ ನಡೆದದ್ದು ಗೊತ್ತಿದೆ ಎಂದರು.
ಇನ್ನು ಭಾರತದ ಗಡಿಯಲ್ಲಿ ಚೆಕ್ಪೋಸ್ಟ್ಗಳು, ಭದ್ರತೆ, ಗುಪ್ತಚರ ಎಲ್ಲ ಇದ್ದರೂ 200 ಕೆ.ಜಿ. ಸ್ಫೋಟಕ ಆರ್ಡಿಎಕ್ಸ್ ಹೇಗೆ ಬಂತು ಎನ್ನುವುದು ಈವರೆಗೂ ದೇಶದ ಜನತೆಗೆ ಗೊತ್ತಾಗಿಲ್ಲ. ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡಿದ ಮೆಹಬೂಬ ಮುಫ್ತಿ ಜೊತೆ ಕಾಶ್ಮೀರದಲ್ಲಿ ಸರಕಾರ ಮಾಡಿದವರು, ತಮ್ಮನ್ನು ದೇಶಪ್ರೇಮಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.