ಬೆಂಗಳೂರು, ಡಿ 27 (DaijiworldNews/HR): ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಇತ್ತೀಚಿನ ಕರ್ನಾಟಕ ಪ್ರವಾಸದ ವೇಳೆ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ.
ಶಿವಮೊಗ್ಗ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ವಾರ್ಷಿಕ ಸಮಾವೇಶದಲ್ಲಿ ಮಧ್ಯಪ್ರದೇಶದ ಸಂಸದೆ ಪ್ರಜ್ಞಾ ಠಾಕೂರ್ ಭಾಗವಹಿಸಿದದು, ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ನಿವಾಸಕ್ಕೂ ಅವರು ಭೇಟಿ ನೀಡಿದ್ದರು.
ಇನ್ನು ಸಮಾರಂಭದಲ್ಲಿ ಮಾತನಾಡುವಾಗ ಪ್ರಜ್ಞಾ ಠಾಕೂರ್, ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಅತ್ಯಂತ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ವೆಂಚರ್ ಕ್ಯಾಪಿಟಲಿಸ್ಟ್ ಮತ್ತು ರಾಜಕೀಯ ವಿಶ್ಲೇಷಕ ತಹಸೀನ್ ಪೊನವಾಲ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಶಿವಮೊಗ್ಗ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಅವರಿಗೆ ದೂರಿನ ಪ್ರತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.
'ಹಿಂದೂಗಳು ತಮ್ಮ ಹೆಣ್ಣು ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ಆಯುಧಗಳನ್ನು ಇಟ್ಟುಕೊಳ್ಳಿ, ಆಯುಧವಿಲ್ಲದಿದ್ದರೆ ತರಕಾರಿ ಕತ್ತರಿಸಲು ಬಳಸುವ ಚಾಕುವನ್ನು ಹರಿತಗೊಳಿಸಿ. ಶಿವಮೊಗ್ಗದ ಹರ್ಷ ಸೇರಿದಂತೆ ಹಿಂದೂ ಕಾರ್ಯಕರ್ತರ ಹತ್ಯೆಯನ್ನ ಉಲ್ಲೇಖಿಸಿದ ಅವರು, ಯಾವುದೇ ಘಟನೆಗಳನ್ನು ಎದುರಿಸಲು ನಮ್ಮ ಚಾಕುಗಳನ್ನು ಹರಿತಗೊಳಿಸಬೇಕು. ಅದು ನಮ್ಮ ಶತ್ರುಗಳ ಮೇಲೂ ಪರಿಣಾಮ ಬೀರುತ್ತದೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು ಎನ್ನಲಾಗಿದೆ.