ಮೊರಾದಾಬಾದ್, ಡಿ 27 (DaijiworldNews/DB): ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ರಾಮಾಯಣದಂತೆ. ರಾಹುಲ್ ಗಾಂಧಿ ಭಗವಾನ್ ಶ್ರೀರಾಮ ಇದ್ದಂತೆ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಚಳಿಯಲ್ಲಿ ನಡುಗುವ ನಾವು ಜಾಕೆಟ್ ಧರಿಸಿ ಓಡಾಡಿದರೆ, ರಾಹುಲ್ ಗಾಂಧಿಯವರು ಕೇವಲ ಟಿ-ಶರ್ಟ್ ಧರಿಸಿ ಯಾತ್ರೆಯಲ್ಲಿ ಪ್ರತಿದಿನ ನಡೆಯುತ್ತಿದ್ದಾರೆ. ನಡುಕ ಹುಟ್ಟಿಸುವ ಚಳಿಯಲ್ಲಿ ಹೀಗೆ ಪ್ರತಿದಿನ ಹೆಜ್ಜೆ ಹಾಕುವುದು ಒಂದು ತಪಸ್ಸಿದ್ದಂತೆ. ಅವರೊಬ್ಬ ಅತಿಮಾನುಷ ವ್ಯಕ್ತಿ ಎಂದರು.
ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಅನುಸರಿಸಿದರೆ ನಾವೂ ಅನುಸರಿಸುತ್ತೇವೆ. ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಕೋವಿಡ್ ಬರುತ್ತದೆ, ಬಿಜೆಪಿಯ ಕಾರ್ಯಕ್ರಮಗಳಲ್ಲಿ ಬರುವುದಿಲ್ಲ ಎನ್ನಲು ಸಾಧ್ಯವಿಲ್ಲ. ದೇಶಕ್ಕೊಂದು ಮಾರ್ಗಸೂಚಿ ಎಂಬುದು ಇದ್ದ ಮೇಲೆ ಅದನ್ನು ಎಲ್ಲರೂ ಅನುಸರಿಸಬೇಕು ಎಂದವರು ಪ್ರತಿಪಾದಿಸಿದರು.