ನವದೆಹಲಿ, ಡಿ 27 (DaijiworldNews/DB): ಚೀನಾ ಮತ್ತು ಇತರ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕಾಗಿ ರಾಷ್ಟ್ಟಾದ್ಯಂತ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳು ಇಂದು ಅಣುಕು ಡ್ರಿಲ್ ನಡೆಯುತ್ತಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಅಣಕು ಡ್ರಿಲ್ ನ ನೇತೃತ್ವ ವಹಿಸಿದ್ದು, ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಬೆಳಗ್ಗೆ 9:45ಕ್ಕೆ ಭೇಟಿ ನೀಡಿ ಆಸ್ಪತ್ರೆ ಮಾಡಿಕೊಂಡಿರುವ ಸಿದ್ದತೆಗಳನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ಭಾರತದಲ್ಲಿ ಕೋವಿಡ್ನ್ನು ಎದುರಿಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ನಡೆಸಲಾಗಿದೆ. ದೇಶದ ಜನ ಕೋವಿಡ್ ನಿಯಮಗಳನ್ನು ಪಾಲಿಸುವುದರಿಂದ ರೋಗ ಬಾರದಂತೆ ತಡೆಯುವುದು ಸಾಧ್ಯವಿದೆ. ಆಸ್ಪತ್ರೆಗಳಲ್ಲಿ ಸರ್ವ ಸನ್ನದ್ದ ಸೌಕರ್ಯಗಳನ್ನು ಪರಿಶೀಲಿಸಿ, ಸುಸ್ಥಿತಿಯಲ್ಲಿಡುವ ಸಲುವಾಗಿ ಅಣುಕು ಡ್ರಿಲ್ ನಡೆಯುತ್ತಿದೆ. ಎಲ್ಲಾ ಆಸ್ಪತ್ರೆಗಳೂ ಇದನ್ನು ನಡೆಸಬೇಕು ಎಂದರು.
ಇನ್ನು ಜಮ್ಮು, ಕೇರಳ, ಕರ್ನಾಟಕ, ದೆಹಲಿ,ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಈಗಾಗಲೇ ಕೋವಿಡ್ -19 ಅಣಕು ಡ್ರಿಲ್ ನಡೆದಿದ್ದು, ಇನ್ನೂ ಹಲವು ಆಸ್ಪತ್ರೆಗಳಲ್ಲಿ ನಡೆಯಲಿದೆ. ಆರೋಗ್ಯ ಸೌಲಭ್ಯಗಳ ಲಭ್ಯತೆಯನ್ನು ಕೇಂದ್ರೀಕರಿಸಿ ಅಣುಕು ಡ್ರಿಲ್ ನಡೆಸಲಾಗುತ್ತಿದೆ. ವೆಂಟಿಲೇಟರ್, ಪ್ರತ್ಯೇಕ ಹಾಸಿಗೆ, ಆಮ್ಲಜನಕ ಸೌಕರ್ಯ, ಐಸಿಯು ಸಾಮರ್ಥ್ಯ ಪರಿಶೀಲನೆ ನಡೆಯಲಿದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ತರಬೇತುಗೊಂಡ ಮಾನವ ಸಂಪನ್ಮೂಲದ ಸಾಮರ್ಥ್ಯ ಪರಿಶೀಲನೆಯೂ ಇದರ ಭಾಗವಾಗಿದೆ.