ಹುಬ್ಬಳ್ಳಿ, ಡಿ 27 (DaijiworldNews/DB): ಕರ್ನಾಕಟದ ಬೆಳಗಾವಿ, ಕಾರವಾರ, ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂಬ ಶಿವಸೇನ ಮುಖಂಡ ಉದ್ದವ್ ಠಾಕ್ರೆ ಹೇಳಿಕೆಗೆ ಸಚಿವ ಕೆ. ಅಶ್ವತ್ ನಾರಾಯಣ ಕಿಡಿ ಕಾರಿದ್ದಾರೆ. ಮುಂಬೈಯಲ್ಲಿ ಮರಾಠಿ ಭಾಷಿಕರು ಎಷ್ಟು ಮಂದಿ ಇದ್ದಾರೆ ಎಂಬುದನ್ನು ಠಾಕ್ರೆ ಮೊದಲು ಲೆಕ್ಕ ಹಾಕಲಿ ಎಂದು ಸವಾಲೆಸೆದಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಮುಗಿದ ಅಧ್ಯಾಯವಾದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ಮತ್ತೆ ಮತ್ತೆ ಕೆದಕಿ ಸಮಸ್ಯೆ ಸೃಷ್ಟಿಸುವುದೇ ಠಾಕ್ರೆ ಕೆಲಸವಾಗಿದೆ. ರಾಜಕೀಯ ಸ್ವಾರ್ಥವೇ ಹೊರತು ಜನಹಿತಕ್ಕಾಗಿ ಅವರು ಈ ರೀತಿ ಮಾತನಾಡುವುದಲ್ಲ ಎಂದರು.
ಕೊರೊನಾದ ನೆಪವೊಡ್ಡಿ ಬಿಜೆಪಿ ಅವಧಿಪೂರ್ವ ಚುನಾವಣೆ ನಡೆಸಲು ಮುಂದಾಗಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರಗೇಟು ನೀಡಿದ ಅಶ್ವತ್ ನಾರಾಯಣ, ವಿಶ್ವದಲ್ಲಿ ಏನಾಗುತ್ತಿದೆ ಎಂಬ ತಿಳುವಳಿಕೆ ಇಲ್ಲದೆ ತಿಳುವಳಿಕೆ ಕೊರತೆಯಿಂದ ಕೆಪಿಸಿಸಿ ಅಧ್ಯಕ್ಷರು ಬಳಲುತ್ತಿದ್ದಾರೆ. ಜನರ ಆರೋಗ್ಯದ ಬಗ್ಗೆ ಕಾಳಜಿ ಅವರಿಗಿಲ್ಲ, ಅಧಿಕಾರ ಕಳೆದುಕೊಂಡ ಚಿಂತೆಯಲ್ಲಿರುವುದರಿಂದ ಅವರು ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮೀಸಲಾತಿ ಪಡೆಯಲು ಒಕ್ಕಲಿಗರು ಭಿಕ್ಷುಕರಲ್ಲ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ವಿಚಾರದಲ್ಲಿ ಏಕಾಏಕಿ ಜಾಗೃತರಾಗಿರುವ ಅವರಿಗೆ ಅವರದೇ ಸರ್ಕಾರದ ಸಂದರ್ಭದಲ್ಲಿ ಮೀಸಲಾತಿ ಭಿಕ್ಷೆ ಎಂಬುದು ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದರು.
ಜನಾರ್ದನ ರೆಡ್ಡಿಯವರ ಹೊಸ ಪಕ್ಷ ಸ್ಥಾಪನೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಲು ಅಶ್ಚತ್ ನಾರಾಯಣ ನಿರಾಕರಿಸಿದರು.