ವಾರಾಣಸಿ, ಡಿ 27 (DaijiworldNews/DB): ರಷ್ಯಾ- ಉಕ್ರೇನ್ ಯುದ್ಧದಲ್ಲಿ ತನ್ನ ಕುಟುಂಬದ ಎಲ್ಲರನ್ನೂ ಕಳೆದುಕೊಂಡ ಉಕ್ರೇನ್ ಪ್ರಜೆಯೊಬ್ಬರು ವಾರಣಾಸಿಯ ಅತಿಥಿ ಗೃಹವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ವಾರಣಾಸಿ ಎಸಿಪಿ ಸಂತೋಷ್ಕುಮಾರ್ ಸಿಂಗ್
ಉಕ್ರೇನ್ ಪ್ರಜೆ ಕೋಸ್ಟಿಯಾಟಿನ್ ಬೆಲಿಯಾಯೆವ್ (50) ಅವರ ಮೃತದೇಹ ವಾರಾಣಸಿಯ ಭೇಲುಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾರದ್ ಘಾಟ್ ಪ್ರದೇಶದ ಅತಿಥಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಉಕ್ರೇನ್ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಭೇಲುಪುರ ಎಸ್ಎಚ್ಒ ರಮಾಕಾಂತ್ ದುಬೆ ತಿಳಿಸಿದ್ದಾರೆ.
ನವೆಂಬರ್ 29ರಿಂದ ನಾರದ್ ಘಾಟ್ನಲ್ಲಿರುವ ಮುನ್ನಾ ಗೆಸ್ಟ್ಹೌಸ್ನಲ್ಲಿ ಉಳಿದುಕೊಂಡಿದ್ದ ಅವರು ಬಿಹಾರದ ಸಸಾರಾಮ್ಗೆ ಭಾನುವಾರ ಬೆಳಗ್ಗೆ ಹೋಗಬೇಕಿತ್ತು. ಆದರೆ ಅಂದು ಅವರು ಬಿಹಾರಕ್ಕೆ ಹೋಗಿರಲಿಲ್ಲ. ಗೆಸ್ಟ್ಹೌಸ್ನಲ್ಲಿ ಬಾಗಿಲು ಹಾಕಿದ್ದ ಸ್ಥಿತಿಯಲ್ಲೇ ಇದ್ದುದರಿಂದ ಬಲವಂತವಾಗಿ ರೂಂ ಬಾಗಿಲನ್ನು ಗೆಸ್ಟ್ಹೌಸ್ ಸಿಬಂದಿ ತೆರೆದರು. ಈ ವೇಳೆ ಸೀಲಿಂಗ್ ರಾಡ್ಗೆ ನೇಣು ಹಾಕಿಕೊಂಡು ಅವರು ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿತ್ತು.
ರಷ್ಯಾ-ಉಕ್ರೇನ್ ಯುದ್ದದಲ್ಲಿ ಈ ವ್ಯಕ್ತಿ ತನ್ನ ಕುಟುಂಬದ ಎಲ್ಲಾ ಸದಸ್ಯರನ್ನು ಕಳೆದುಕೊಂಡಿದ್ದರು. ಆ ಬಳಿಕ ತುಂಬಾ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಇನ್ನು ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಾರಣಾಸಿ ಎಸಿಪಿ ಸಂತೋಷ್ಕುಮಾರ್ ಸಿಂಗ್, ಒಳಗಿನಿಂದ ಕೊಠಡಿ ಬೀಗ ಹಾಕಲಾಗಿತ್ತು. ಹೀಗಾಗಿ ಇದು ಆತ್ಮಹತ್ಯೆಯೇ ಎಂದು ಶಂಕಿಸಲಾಗಿದೆ ಎಂದು ತಿಳಿಸಿದರು.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821