ಬಲರಾಂಪುರ, ಡಿ 26 (DaijiworldNews/DB): ನಾಯಿಗಳ ದಾಳಿಗೆ ಹೆದರಿ ದಿಕ್ಕಾಪಾಲಾಗಿ ರೈಲು ಟ್ರ್ಯಾಕ್ ಮೇಲೆ ಓಡಿದ 90 ಕುರಿಗಳು ರೈಲಿನಡಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಇಲ್ಲಿನ ಗೋರಖ್ಪುರ-ಗೊಂಡಾ ಮಾರ್ಗದಲ್ಲಿ ನಡೆದಿದೆ. ಇನ್ನು ಸಾವನ್ನಪ್ಪಿದ ಕುರಿಗಳ ಮಾಂಸ ತಿನ್ನಲು ಬಂದ ಎಂಟು ರಣಹದ್ದುಗಳೂ ರೈಲಿನಡಿಗೆ ಬಿದ್ದು ಮೃತಪಟ್ಟಿವೆ.
ವಿಶಂಪುರ ಕೋಡಾರ್ ಗ್ರಾಮದ ನಿವಾಸಿ ಪ್ರಭುರಾಮ್ ಅವರು ಕುರಿ ಮೇಯಿಸಲು ಹೋಗಿದ್ದ ವೇಳೆ ಅವರ ಮೇಲೆ ನಾಯಿಗಳ ಹಿಂಡೊಂದು ದಾಳಿ ನಡೆಸಿದ್ದು, ಈ ವೇಳೆ ಹೆದರಿದ ಕುರಿಗಳು ರೈಲು ಟ್ರ್ಯಾಕ್ ಮೇಲೆ ಓಡಿವೆ. ಈ ವೇಳೆ ಗೋರಖ್ಪುರದಿಂದ ಲಖನೌಗೆ ತೆರಳುತ್ತಿದ್ದ ರೈಲು ಕುರಿಗಳ ಮೇಲೆ ಹರಿದಿದೆ. ಘಟನೆಯಲ್ಲಿ 90 ಕುರಿಗಳು ಸಾವನ್ನಪ್ಪಿವೆ. ಅವುಗಳನ್ನು ತಿನ್ನಲು ಬಂದ ಎಂಟು ರಣಹದ್ದುಗಳೂ ರೈಲಿನ ಗಾಲಿಗಳಿಗೆ ಸಿಲುಕಿ ಪ್ರಾಣಬಿಟ್ಟಿವೆ. ಘಟನೆ ಭಾನುವಾರ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಕುರಿಗಳ ಮಾಲಕ ಪ್ರಭುರಾಮ್ ಸರಯೂ ಕಾಲುವೆಗೆ ಹಾರಿ ನಾಯಿಗಳ ದಾಳಿಯಿಂದ ರಕ್ಷಿಸಿಕೊಂಡಿದ್ದಾರೆ. ಸ್ಥಳೀಯ ಶಾಸಕ ಎಸ್.ಪಿ. ಯಾದವ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕುರಿ ಮಾಲಕರಿಗೆ 40 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈಲ್ವೆ ಸಚಿವರು ಹಾಗೂ ರಾಜ್ಯ ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.