ಬೆಂಗಳೂರು, ಡಿ 26 (DaijiworldNews/DB): 13 ಕೋಟಿ ರೂಪಾಯಿ ಸಾಲ ನೀಡುವುದಾಗಿ ಉದ್ಯಮಿಯೊಬ್ಬರಿಂದ 27ಲಕ್ಷ ರೂ. ಕಮಿಷನ್ ಪಡೆದು 1 ಕೋಟಿ ರೂ. ನಕಲಿ ನೋಟು ನೀಡಿದ ಆರೋಪದಲ್ಲಿ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 500 ರೂ. ಮುಖಬೆಲೆಯ 1 ಕೋಟಿ ರೂ. ಖೋಟಾ ನೋಟುಗಳು ಸಹಿತ ಹಲವು ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರ್ಟಿ ನಗರದ ಮನ್ನಾ ಶರುಣ್ (35), ಆರ್. ವಿಷ್ಣು ರಾಜನ್ (26) ಮತ್ತು ರಾಮಮೂರ್ತಿ ನಗರದ ಪ್ರವೀಣ್ ಕುಮಾರ (40) ಬಂಧಿತರು. ಜಯನಗರದ ಜೆ.ಎನ್ ಪ್ರಾಜೆಕ್ಟ್ ಪಾಲುದಾರ ಎನ್. ಪಾರ್ಥಸಾರಥಿ ಎಂಬವರಿಗೆ ಆರೋಪಿಗಳು 13 ಕೋಟಿ ರೂ. ಸಾಲ ನೀಡುವುದಾಗಿ ನಂಬಿಸಿ ಅವರಿಂದ ಕಮಿಷನ್ ರೂಪದಲ್ಲಿ 27ಲಕ್ಷ ರೂ. ಹಣವನ್ನು ವಸೂಲಿ ಮಾಡಿ ಬಳಿಕ ವಂಚಿಸಿದ್ದರು. ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ಕಾರ್ಯಾಚರಣೆಗಿಳಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಂಕಿತ ಆರೋಪಿಗಳಾದ ಆಶಾಲತಾ ರಾವ್, ಲಕ್ಷ್ಮಣ್ ರಾವ್ ಮತ್ತು ತುಷಾರ್ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ. ಬಂಧಿತರಿಂದ 500 ರೂಪಾಯಿ ಮುಖಬೆಲೆಯ ಒಂದು ಕೋಟಿ ಮೊತ್ತದ ಖೋಟಾ ನೋಟುಗಳು, ಎರಡು ಐಷಾರಾಮಿ ಕಾರುಗಳು, 20 ಲಕ್ಷ ರೂ. ನಗದು ಸೇರಿದಂತೆ 6 ಕೆಜಿ ತೂಕದ ನಕಲಿ ಚಿನ್ನದ ಬಿಸ್ಕತ್ ಹಾಗೂ ನಕಲಿ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಏನಿದು ಪ್ರಕರಣ?
ಕಟ್ಟಡ ನಿರ್ಮಾಣಕ್ಕಾಗಿ ಬಾಣಸವಾಡಿಯಲ್ಲಿರುವ ಬ್ಯಾಂಕ್ವೊಂದರಿಂದ ಪಾರ್ಥಸಾರಥಿ ಅವರು 1.75 ಕೋಟಿ ರೂ. ಸಾಲ ಮಾಡಿದ್ದರು. ಆದರೆ ವ್ಯವಹಾರದಲ್ಲಿ ನಷ್ಟವುಂಟಾದ್ದರಿಂದ ಸಾಲ ಮರುಪಾವತಿಸಲಾಗದೆ ಸಂಕಷ್ಟಕ್ಕೊಳಗಾಗಿದ್ದರು. ಈ ವೇಳೆ ಬಿಲ್ಡರ್ ಮತ್ತು ಎಂಜಿನಿಯರ್ಗಳಾದ ಮನ್ನಾ ಶರುಣ್, ಆರ್. ವಿಷ್ಣುರಾಜನ್ ಹಾಗೂ ಪ್ರವೀಣ್ಕುಮಾರ್ ಪರಿಚಯವಾಗಿ ಸಾಲ ನೀಡುವುದಾಗಿ ನಂಬಿಕೆ ಹುಟ್ಟಿಸಿದ್ದರು. ಇವರಿಂದ ಪಾರ್ಥಸಾರಥಿ ಅವರು 13 ಕೋಟಿ ರೂಪಾಯಿ ಸಾಲ ಕೇಳಿದ್ದು, ಆರಂಭದಲ್ಲಿ 1 ಕೋಟಿ ರೂ. ಹಾಗೂ ಉಳಿದ ಮೊತ್ತವನ್ನು ಸ್ವಲ್ಪ ದಿನದ ಬಳಿಕ ನೀಡುವುದಾಗಿ ಭರವಸೆಯಿತ್ತಿದ್ದರು. ಅವರನ್ನು ನಂಬಿದ ಪಾರ್ಥಸಾರಥಿ ಕಮಿಷನ್ ಹಣವಾಗಿ 26 ಲಕ್ಷ ರೂ.ಗಳನ್ನು ವಂಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ವಂಚಕರು ನೀಡಿದ 1 ಕೋಟಿ ರೂ. ಬಂಡಲ್ ತೆರೆದು ನೋಡಿದಾಗ ಮೇಲಿದ್ದ 500 ರೂ. ನೋಟು ಮಾತ್ರ ಅಸಲಿಯಾಗಿದ್ದು 10 ಬಂಡಲ್ನಲ್ಲಿದ್ದ ಉಳಿದೆಲ್ಲಾ ನೋಟುಗಳು ಖೋಟಾ ನೋಟುಗಳಾಗಿದ್ದವು.
ಅಮಾಯಕರನ್ನೇ ಟಾರ್ಗೆಟ್ ಮಾಡಿಕೊಂಡು ಸಾಲ ಕೊಡಿಸುವ ನೆಪದಲ್ಲಿ ಕಮಿಷನ್ ಹಣ ಪಡೆದು ವಂಚಿಸುವುದು, ನಕಲಿ ಚಿನ್ನ ಮಾರಾಟವನ್ನೇ ಆರೋಪಿಗಳು ವೃತ್ತಿಯಾಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.