ಬೆಳಗಾವಿ, ಡಿ 25 (DaijiworldNews/HR): ದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ತಡೆಯಲು ಬಿಜೆಪಿ ಮತ್ತೆ ಕೊರೊನಾ ಬಳಕೆ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದನ್ನು ಸಹಿಸಿಕೊಳ್ಳದ ಬಿಜೆಪಿ ಅದನ್ನು ತಡೆಯಲು ಕೊರೊನಾ ನೆಪ ಹೇಳುತ್ತಿದೆ ಎಂದರು.
ಇನ್ನು ದೇಶದಲ್ಲಿ 2019ರಿಂದ ಕೊರೊನಾ ಇತ್ತು. ಮೊದಲ ಹಾಗೂ ಎರಡನೇ ವರ್ಷದಲ್ಲಿ ಬಹಳ ವೇಗವಾಗಿ ಹರಡಿತ್ತು. ಆದರೆ ಈಗ ಕೊರೊನಾ ಅಂತಹ ಅಪಾಯಕಾರಿಯಾಗಿ ಕಾಣಿಸುತ್ತಿಲ್ಲ. ಈಗ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ ನಡೆಗೆ ದೇಶದ ಜನ ಹೆದರಿ ಮತ್ತೆ ಮಾಸ್ಕ್ ಹಾಕಿಕೊಳ್ಳಲು ಯೋಚಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.