ಬೆಂಗಳೂರು, ಡಿ 25 ( DaijiworldNews/MS): ಬಿಜೆಪಿ ಗುಡ್ ಬೈ ಹೇಳಿ , ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿರುವ ಘೋಷಣೆ ಮಾಡಿರುವ ಜನಾರ್ಧನ ರೆಡ್ಡಿ ತಮ್ಮ ಪತ್ನಿ ಕೂಡ ತಮ್ಮೊಂದಿಗೆ ಇನ್ನುಮುಂದೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿಯಾಗುವ ಬಗ್ಗೆ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿ ಮಾತನಾಡಿದ ಅವರು, ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸುವುದಕ್ಕೆ ನನ್ನ ಪತ್ನಿ ಅರುಣಾ ಲಕ್ಷ್ಮಿ ಅವರ ಸಲಹೆ, ಪ್ರೇರಣೆಯೇ ಮುಖ್ಯ ಕಾರಣ. ನನ್ನ ಪಕ್ಷದ ಜತೆಗೆ ಅವರು ಅಧಿಕೃತವಾಗಿ ಗುರುತಿಸಿಕೊಂಡು ಇನ್ನುಮುಂದೆ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಾರೆ. ಅದಕ್ಕಾಗಿಯೇ ಈಗ ಗಂಗಾವತಿಯಲ್ಲಿ ಹೊಸ ಮನೆಯನ್ನೂ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಚಿಕ್ಕವನಿದ್ದಾಗ ಗೋಲಿಯಾಡುವಾಗ ಗುರಿಯಿಟ್ಟು ಹೊಡೆದು ಅದರಲ್ಲಿ ಗೆಲ್ಲುತ್ತಿದ್ದೆ. ಸೋಲನ್ನು ಯಾವತ್ತೂ ಒಪ್ಪಿಕೊಳ್ಳುತ್ತಿರಲಿಲ್ಲ. ಅಲ್ಲಿಂದ ಇಲ್ಲಿವರೆಗೆ ಏನೇ ಹೊಸ ಕೆಲಸ ಪ್ರಾರಂಭಿಸಿದ್ದರೂ ಅದರಲ್ಲಿ ನಾನು ಸೋತಿಲ್ಲ. ಈಗ ಹೊಸ ಪಕ್ಷ ಸ್ಥಾಪಿಸಿದ್ದು, ಮುಂದೆ ಅದರಲ್ಲಿಯೂ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.