ಕೊಟ್ಟಾಯಂ, ಡಿ 25 (DaijiworldNews/HR): ಕೊರೊನಾದ ಜೊತೆಗೆಯೇ ಇದೀಗ ಹಕ್ಕಿ ಜ್ವರ ಹೆಚ್ಚಳಗೊಂಡಿದ್ದು, ಮುನ್ನೇಚ್ಚರಿಕಾ ಕ್ರಮವಾಗಿ ಕೇರಳದ ಕೊಟ್ಟಾಯಂ ಜಿಲ್ಲೆಯ ಮೂರು ಗ್ರಾಮಗಳಲ್ಲಿ 6,000ಕ್ಕೂ ಹೆಚ್ಚು ಪಕ್ಷಿಗಳ ಮಾರಣಹೋಮ ಮಾಡಲಾಗಿದೆ.
ಕೊಟ್ಟಾಯಂ ಜಿಲ್ಲೆಯ ವೇಚೂರು, ನೀಂದೂರು ಮತ್ತು ಅರ್ಪೂಕರ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ 6,017 ಪಕ್ಷಿಗಳು ಅವುಗಳಲ್ಲೂ ಹೆಚ್ಚಾಗಿ ಬಾತುಕೋಳಿಗಳನ್ನು ಹತ್ಯೆ ಮಾಡಲಾಗಿದೆ.
ಇನ್ನು ವೇಚೂರಿನಲ್ಲಿ ಸುಮಾರು 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನೀಂದೂರಿನಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪೂಕರದಲ್ಲಿ 2,975 ಬಾತುಕೋಳಿಗಳು ಸಾವನ್ನಪ್ಪಿವೆ ಎಂದು ಕೊಟ್ಟಾಯಂ ಜಿಲ್ಲಾಡಳಿತ ಮಾಹಿತಿ ನೀಡಿದೆ
ಹಕ್ಕಿ ಜ್ವರ ಎಂದರೆ ಅದು ಹಕ್ಕಿಗಳಿಗೆ ಬರುವಂತಹ ಜ್ವರವಾಗಿದೆ. ಆದರೆ ಇದು ಮನುಷ್ಯರಿಗೆ ಕೂಡ ಹಬ್ಬುವ ಕಾರಣದಿಂದಾಗಿ ತುಂಬಾ ಭೀತಿಯ ವಾತಾವರಣ ಸೃಷ್ಟಿಯಾಗಿದೆ.
ಹಲವಾರು ರೀತಿಯ ಹಕ್ಕಿ ಜ್ವರದ ಮಾದರಿಗಳನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿ ನಾಲ್ಕು ಮಾದರಿಯಾಗಿರುವಂತಹ H5N1, H7N9, H5N6 ಮತ್ತು H5N8 ಮಾದರಿಯ ಹಕ್ಕಿ ಜ್ವರಗಳು ಇತ್ತೀಚಿನ ವರ್ಷಗಳಲ್ಲಿ ತುಂಬಾ ಭಯ ಹುಟ್ಟಿಸಿದೆ ಎನ್ನಲಾಗಿದೆ.